More

    ಮೋದಿ ಇರುವ ತನಕವೂ ಕೇಂದ್ರದಲ್ಲಿರಲಿದೆ ಬಿಜೆಪಿ ಸರ್ಕಾರ

    ಯಳಂದೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ತ್ರಿಬಲ್ ಇಂಜಿನ್ ಮಾಡುವತ್ತ ಕಾರ್ಯಕರ್ತರು ಸನ್ನದ್ಧರಾಗಿ ಎಂದು ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಕರೆ ನೀಡಿದರು.


    ಪಟ್ಟಣದ ಅಗ್ರಹಾರ ಬೀದಿಯ ಶಂಕರ ಸಭಾ ಭವನದ ಮುಂಭಾಗ ಗುರುವಾರ ಪಕ್ಷದ ಟೌನ್‌ನ ಬೂತ್ ಮಟ್ಟದ ಸದಸ್ಯರ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬರುತ್ತಿವೆ. ಆದರೆ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇದರಲ್ಲೂ ಬಿಜೆಪಿಯನ್ನು ಗೆಲ್ಲಿಸಿದರೆ ಇನ್ನಷ್ಟು ಅಭಿವೃದ್ಧಿ ಮಾಡುವುದು ಸುಲಭವಾಗುತ್ತದೆ ಎಂದರು.


    ನರೇಂದ್ರಮೋದಿ ಇರುವ ತನಕವೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಎರಡೂ ಮಾತಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇದರೊಂದಿಗೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ನಾನು ಇಲ್ಲಿನ ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಅನೇಕ ಯೋಜನೆಗಳ ಮೂಲಕ ಅನುದಾನವನ್ನು ತಂದಿದ್ದೇನೆ. ಮತ್ತಷ್ಟು ಅಭಿವೃದ್ಧಿಯ ಕನಸನ್ನು ಕಂಡಿದ್ದು ಇದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ. ಬೂತ್‌ಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ತಮ್ಮ ಮನೆಯಿಂದಲೇ ಪಕ್ಷದ ಪರವಾಗಿ ಮತಯಾಚನೆಯನ್ನು ಮಾಡಬೇಕು ಎಂದು ಹೇಳಿದರು.
    ಈ ಬಾರಿ ಪಟ್ಟಣದ ಅಭಿವೃದ್ಧಿಗೆ 3.97 ಕೋಟಿ ರೂ. ಹಾಗೂ 4.50 ಕೋಟಿ ರೂ. ವಿಶೇಷ ಅನುದಾನವನ್ನು ತಂದು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.


    ಬಿಜೆಪಿ ಮಂಡಲದ ಅಧ್ಯಕ್ಷ ಮಹೇಶ್, ನಿಂಗರಾಜು, ಮಹೇಶ್, ರಘು, ಮದ್ದೂರು ಶ್ರೀಕಂಠ, ಅನಿಲ್, ಚಂದ್ರಶೇಖರ್, ಮಲ್ಲಿಕ್, ಭೀಮಪ್ಪ, ವಿದ್ಯಾಮಲ್ಲೇಶ್, ಕಾಳಿಪ್ರಸಾದ್, ರಾಮನಾಯಕ, ಮಾಂಬಳ್ಳಿ ಮಲ್ಲಿಕ್, ಜಗದೀಶ್, ಅಗ್ರಹಾರ ಮಹೇಶ್, ರಾಮು, ಅಗರ ರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts