ದಾವಣಗೆರೆ: ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಿಂದ ಮೈಸೂರಿನ ಪುರಭವನದಲ್ಲಿ ಜ.28ರಂದು ರಾಜ್ಯ ಮಟ್ಟದ ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟ ಸ್ಥಾಪನೆಯಾಗಿ 2 ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಲೆಮಾರಿಗಳ ಜೀವನ ಇತರರಂತೆ ಹಸನ್ಮುಖಿ ಆಗಬೇಕಿದೆ. ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
46 ಜಾತಿಗಳನ್ನು ಒಳಗೊಂಡ ಈ ಅಲೆಮಾರಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕು. 2016ರಲ್ಲಿ ನೀಡುತ್ತಿದ್ದ ಉಚಿತ ಶಿಕ್ಷಣ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷೆ ಪಿ.ಎಸ್. ಇಂದಿರಾ, ಗೊಂದಲಿ ಸಮಾಜದ ಆರ್. ಚಡೋಜಿರಾವ್, ಜೋಗಿ ಸಮಾಜದ ಮಂಜುನಾಥ್, ದೊಂಬಿದಾಸ ಸಮಾಜದ ವೀರೇಶ್ ಇದ್ದರು