More

    ಮೆಕ್ಕೆಜೋಳಕ್ಕೆ ಬಂತು ಉತ್ತಮ ದರ

    ರಾಣೆಬೆನ್ನೂರ: ಕರೊನಾ ಎರಡನೇ ಅಲೆ ಸೆಮಿ ಲಾಕ್​ಡೌನ್ ಸಮಯದಲ್ಲೂ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಜೋರಾಗಿಯೇ ನಡೆದಿದೆ.

    ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳವನ್ನು ತಮ್ಮ ಜಮೀನು ಅಥವಾ ಒಣಗಿಸಲು ಹಾಕಿದ ಸ್ಥಳದಿಂದಲೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು. ಆದರೆ, ಕರೊನಾ ಎರಡನೇ ಅಲೆಯಿಂದಾಗಿ ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದು ಖರೀದಿಸುವವರು ಕಡಿಮೆಯಾಗಿದ್ದಾರೆ.

    ಇದರಿಂದಾಗಿ ಬಹುತೇಕ ರೈತರು ಕರೊನಾ ಸಮಯದಲ್ಲಿ ಮೆಕ್ಕೆಜೋಳವನ್ನು ಎಪಿಎಂಸಿಗೆ ತಂದು ಮಾರಾಟ ಮಾಡುತ್ತಿದ್ದು, ಸದ್ಯ ಎಪಿಎಂಸಿಯಲ್ಲಿ ಮೆಕ್ಕೆಜೋಳ ವ್ಯಾಪಾರ ವಹಿವಾಟು ಭರದಿಂದ ಸಾಗಿದೆ.

    ಮೇ ತಿಂಗಳಲ್ಲಿ ಅತಿ ಹೆಚ್ಚು: ನಗರದ ಎಪಿಎಂಸಿ ಆವರಣದಲ್ಲಿ ಕಳೆದ ಜನವರಿ ತಿಂಗಳು 25,575 ಕ್ವಿಂಟಾಲ್, ಫೆಬ್ರವರಿಯಲ್ಲಿ 14,055 ಕ್ವಿಂಟಾಲ್, ಮಾರ್ಚ್​ನಲ್ಲಿ 33,604 ಕ್ವಿಂಟಾಲ್, ಏಪ್ರಿಲ್​ನಲ್ಲಿ 25,120 ಕ್ವಿಂಟಾಲ್ ಮೆಕ್ಕೆಜೋಳ ಮಾರಾಟವಾಗಿದ್ದರೆ, ಕರೊನಾ ಆರ್ಭಟ ಜೋರಾಗಿದ್ದ ಮೇ ತಿಂಗಳಲ್ಲಿ 40 ಸಾವಿರ ಕ್ವಿಂಟಾಲ್​ಗೂ ಅಧಿಕ ಮಾರಾಟವಾಗಿದೆ.

    ಮಳೆಯಿಂದ ಎಪಿಎಂಸಿ ಆವರಣ ಆಯ್ಕೆ: ತಾಲೂಕಿನಲ್ಲಿ ನೀರಾವರಿ ಮಾಡಿಕೊಂಡು 20 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮೇ ತಿಂಗಳ ಆರಂಭದಲ್ಲಿ ಎಲ್ಲ ರೈತರು

    ಬೆಳೆಯನ್ನು ಕಟಾವು ಮಾಡಿ ಜಮೀನುಗಳ ಪಕ್ಕದ ರಸ್ತೆ, ಕಣಗಳಲ್ಲಿ ಒಣ ಹಾಕಿದ್ದರು. ಆದರೆ, ಆಗ ತೌಕ್ತೆ ಚಂಡ ಮಾರುತದಿಂದ ವಾರಗಳ ಕಾಲ ವಿಪರೀತ ಮಳೆ ಸುರಿದ ಪರಿಣಾಮ ಬಹುತೇಕ ರೈತರು ಮೆಕ್ಕೆಜೋಳ ಬೆಳೆಯನ್ನು ಸಂರಕ್ಷಿಸಿಡಲು ಹಾಗೂ ಒಣಹಾಕಲು ಎಪಿಎಂಸಿ ಆವರಣಕ್ಕೆ ತಂದಿದ್ದರು. ತೌಕ್ತೆ ಚಂಡ ಮಾರುತದ ಬಳಿಕ ಬಿಸಿಲು ಬಿದ್ದಿದ್ದರಿಂದ ರೈತರು ಮೆಕ್ಕೆಜೋಳವನ್ನು ಒಣಗಿಸಿದ್ದು, ಇದೀಗ ಮಾರಾಟ ಮಾಡುತ್ತಿದ್ದಾರೆ.

    ಉತ್ತಮ ಬೆಲೆ: 2020ರ ಸೆಪ್ಟೆಂಬರ್​ನಿಂದ ಡಿಸೆಂಬರ್​ವರೆಗೂ ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಆ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಮಾರುಕಟ್ಟೆಗೆ ಬಂದ ಕಾರಣ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 900 ರಿಂದ 800 ರೂಪಾಯಿವರೆಗೂ ಬೆಲೆ ಇಳಿಕೆಯಾಗಿತ್ತು. ಆಗ ರೈತರು 1,600 ರೂಪಾಯಿಗೆ ಕ್ವಿಂಟಾಲ್​ನಂತೆ ದರ ನಿಗದಿಪಡಿಸಿ ಬೆಂಬಲ

    ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಹೋರಾಟ ಸಹ ಮಾಡಿದ್ದರು. ಆದರೀಗ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದ್ದು, ಒಂದು ಕ್ವಿಂಟಾಲ್​ಗೆ 1,625 ರೂಪಾಯಿ ವರೆಗೂ ಮಾರಾಟವಾಗುತ್ತಿದೆ.

    ಕರೊನಾ ಎರಡನೇ ಅಲೆಯಿಂದ ಹೊರ ಜಿಲ್ಲೆ, ರಾಜ್ಯಗಳಿಂದ ಖರೀದಿದಾರರು ಬಾರದ್ದರಿಂದ ಬಹುತೇಕ ರೈತರು ಎಪಿಎಂಸಿಗೆ ಮೆಕ್ಕೆ ಜೋಳ ಮಾರಾಟಕ್ಕೆ ತಂದಿದ್ದಾರೆ. ಹೀಗಾಗಿ ವ್ಯಾಪಾರ ಚೆನ್ನಾಗಿದೆ. ಬೆಲೆಯೂ ಸದ್ಯ ಉತ್ತಮ ವಾಗಿದೆ.

    | ಪರಮೇಶ ನಾಯ್ಕ

    ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ನೀರಾವರಿ ಮಾಡಿಕೊಂಡು 5 ಎಕರೆ ಮೆಕ್ಕೆಜೋಳ ಬೆಳೆದಿದ್ದೇವೆ. ಬೆಳೆ ಮಾರಾಟಕ್ಕೆ ಬರುವ ಸಮಯಕ್ಕೆ ಕರೊನಾ ಎರಡನೇ ಅಲೆ ಶುರುವಾಯಿತು. ಹೀಗಾಗಿ ಹೊರಗಡೆಯಿಂದ ಬರುವ ಖರೀದಿದಾರರನ್ನು ನಂಬುವ ಬದಲು ಎಪಿಎಂಸಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದೇವೆ. ಕ್ವಿಂಟಾಲ್​ಗೆ 1,625 ರೂಪಾಯಿನಂತೆ ಖರೀದಿ ಆಗಿವೆ.

    | ಗಣೇಶಪ್ಪ ಸಾಲಿಮನಿ ಮೆಕ್ಕೆಜೋಳ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts