ಭಟ್ಕಳ: ಮೀನುಗಾರಿಕೆ ಆರಂಭಿಸುವ ಮುನ್ನ ಭಟ್ಕಳ ತಾಲೂಕಿನ ಪರ್ಷಿಯನ್ ಬೋಟ್ ಸಂಘದ ಪಧಾಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಶುಕ್ರವಾರ ಇಲ್ಲಿನ ಬಂದರು ಕಡಲ ತೀರದಲ್ಲಿ ಸಾಮೂಹಿಕ ಸಮುದ್ರ ಪೂಜೆ ಸಲ್ಲಿಸಿದರು.
ಬಂದರು ದೇವಸ್ಥಾನದ ಪುರೋಹಿತ ಉಮೇಶ ಭಟ್ ನೇತೃತ್ವದಲ್ಲಿ ಬೆಳಗ್ಗೆ 9ಗಂಟೆಗೆ ಸಮುದ್ರ ದಂಡೆಯ ಮೇಲೆ ಪೂಜಾವಿಧಿಗಳನ್ನು ನೆರವೆರಿಸಲಾಯಿತು.
ಧಾರ್ವಿುಕ ವಿಧಿಯಂತೆ ಮರಳಿನಲ್ಲಿ ಕಲಶ ಸ್ಥಾಪನೆ ಮಾಡಿ ಪರಮೇಶ್ವರ ಹಾಗೂ ಸಮುದ್ರರಾಜನನ್ನು ರುದ್ರ ಪಠನ ಸಹಿತ ಪೂಜಿಸಲಾಯಿತು. ಪುರೋಹಿತರ ಮಾರ್ಗದರ್ಶನದಲ್ಲಿ ಸಂಘದ ಅಧ್ಯಕ್ಷ ವೆಂಕಟ್ರಮಣ ಮೊಗೇರ ವೂಜಾವಿಧಿ ನೆರವೆರಿಸಿದರು.
ಮೀನುಗಾರಿಕೆ ಮರು ಆರಂಭ ಹಿನ್ನೆಲೆಯಲ್ಲಿ ಪೂಜೆ: ಎರಡು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಮೀನುಗಾರಿಕೆ ಪುನರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಿ ಸಮುದ್ರರಾಜನಿಗೆ ಎಳನೀರು, ಹಾಲು, ಹಣ್ಣು, ಸಕ್ಕರೆ, ಖರ್ಜೂರ ಸಹಿತ ಫಲ ಪಂಚಾಮೃತಾಭಿಷೇಕ ಹೂ ಹಣ್ಣು ಹಾಗೂ ವಿಶೇಷವಾಗಿ ಚಿನ್ನದಿಂದ ಮಾಡಲಾದ ಜನಿವಾರ, ಸೀರೆ ಅರ್ಪಿಸಲಾಯಿತು.
ಪರ್ಷಿಯನ್ ಬೋಟ್ ಯೂನಿಯನ್ ಅಧ್ಯಕ್ಷ ವೆಂಕಟ್ರಮಣ ಮೊಗೇರ ಮುಂಡಳ್ಳಿ, ಉಪಾಧ್ಯಕ್ಷ ತಿಮ್ಮಪ್ಪ ಎಮ್ಖಾರ್ವಿ, ಭಾಸ್ಕರ ಖಾರ್ವಿ, ಕಾರ್ಯದರ್ಶಿ ಈಶ್ವರ ಮೊಗೇರ, ಖಜಾಂಚಿ ರಾಮಾ ಮೊಗೇರ ಪರ್ಷಿಯನ್ ಬೋಟ್ ಮಾಲೀಕರು, ಮೀನುಗಾರರು ಇದ್ದರು.