ಗೊಳಸಂಗಿ: ಕ್ಷಣಿಕ ಸುಖ ಕೊಡುವ ಮಾದಕ ವಸ್ತುಗಳ ಸೇವನೆಯಿಂದ ಜೇನುಗೂಡಿನಂತಿದ್ದ ಕುಟುಂಬಗಳು ಒಡೆಯುವ ಜತೆಗೆ ಆರೋಗ್ಯ ಹಾಳಾಗುತ್ತದೆ ಎಂದು ಪಿಎಸ್ಐ ಯತೀಶ ಕೆ.ಎನ್. ಹೇಳಿದರು.
ಸಮೀಪದ ಕೂಡಗಿ ಎನ್ಟಿಪಿಸಿ ಠಾಣೆಯ ಪೊಲೀಸರು ತೆಲಗಿ ಗ್ರಾಮದಲ್ಲಿ ಸ್ಥಳೀಯ ಸದ್ಗುರು ಸದಾನಂದ ಪ್ರೌಢಶಾಲಾ ವಿದ್ಯಾರ್ಥಿಗಳ ಜತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಚರಿಸಿ ಜನಜಾಗೃತಿ ಮೂಡಿಸಿದ ವೇಳೆ ಅವರು ಮಾತನಾಡಿದರು.
ಠಾಣಾ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಅನಧಿಕೃತವಾಗಿ ಮಾದಕ ವಸ್ತುಗಳ ಮಾರಾಟ, ಮತ್ತಿತರ ಚಟುವಟಿಕೆಗಳು ನಡೆದಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ತಮ್ಮ ಭವಿಷ್ಯತ್ತಿನ ಬಾಳಿನತ್ತ ನೋಟ ಹರಿಸಬೇಕೆಂದರು.
ಎಎಸ್ಐಗಳಾದ ಎಂ.ಎಂ.ಮುಲ್ಲಾ, ಎಲ್.ಡಿ.ರೂಢಗಿ, ಹವಾಲ್ದಾರ್ ಗುರು ಹಡಪದ, ಪೊಲೀಸ್ ಕಾನ್ಸ್ಟೇಬಲ್ಗಳಾದ ಶಿವಯ್ಯ ಮಠಪತಿ, ರಾಘವೇಂದ್ರ ಉಪ್ಪಲದಿನ್ನಿ, ಸೋಮು ರಾಠೋಡ, ಹರೀಶ ಕರಿಗಾರ ಇತರರಿದ್ದರು.