ಹುಮನಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸುಕ್ಷೇತ್ರ ಮಾಣಿಕನಗರದ ಶ್ರೀ ಮಾಣಿಕಪ್ರಭು ಸಂಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.
ಮಾಣಿಕಪ್ರಭು ವೇದ ವಿದ್ಯಾಲಯದ ಶಿಕ್ಷಕರು, ಪ್ರಮುಖ ಅರ್ಚಕರು ಪೂರ್ಣ ಕುಂಭದೊಂದಿಗೆ ಭವ್ಯ ಸ್ವಾಗತ ನೀಡಿದರು. ದೇವಸ್ಥಾನದಲ್ಲಿ ಮಾಣಿಕಪ್ರಭು ಸಂಜೀವಿನಿ ಮಹಾ ಸಮಾಧಿ, ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭುಗಳ ದರ್ಶನ ಆಶೀರ್ವಾದ ಪಡೆದರು.
ನಂತರ ಶ್ರೀಗಳ ಜತೆ ಕೆಲಕಾಲ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ ಭಾಗವತ್, ಮಾಣಿಕಪ್ರಭು ಸಂಸ್ಥೆಯಿAದ ನಡೆಯುತ್ತಿರುವ ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಮಾಹಿತಿ ಪಡೆದುಕೊಂಡರು.
೫೦ನೇ ವರ್ಷ ಆಚರಿಸಿಕೊಂಡ ಮಾಣಿಕ ಪಬ್ಲಿಕ್ ಶಾಲೆಗೂ ಭೇಟಿ ನೀಡಿದರು. ಐವತ್ತನೇ ವಾರ್ಷಿಕ ಸಂಭ್ರಮದಲ್ಲಿ ಭಾಗವಹಿಸಲು ಆಗದಿರುವುದರಿಂದ ಈಗ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಸಂಸ್ಥಾನದ ಪ್ರಮುಖರಾದ ಆನಂದರಾಜ ಪ್ರಭು, ಚೇತನರಾಜ ಪ್ರಭು ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.