ಸೊರಬ: ಆನವಟ್ಟಿ ಹೋಬಳಿಯ ಮಳೆ ಹಾನಿಗೆ ಸರ್ಕಾರ ತಕ್ಷಣ ಸ್ಪಂದಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ರೈತರು ಆನವಟ್ಟಿಯ ನಾಡ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಬೆಳೆ, ಮನೆಗಳು ಹಾನಿಯಾಗಿವೆ. ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಜೋಳ ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಬೆಳೆ ಕಟಾವು ಆಧರಿಸಿ ಪರಿಹಾರ ನೀಡಬೇಕು. ಮನೆ ಹಾನಿಗೆ ಪುಡಿಗಾಸಿನ ಪರಿಹಾರ ನೀಡದೆ, ಸಂಪೂರ್ಣ ಮನೆ ಕಟ್ಟಿಸಿಕೊಳ್ಳಲು ಪರಿಹಾರ ನೀಡಬೇಕು. ಪರಿಹಾರವನ್ನು ತಕ್ಷಣ ಸಂತ್ರಸ್ತರಿಗೆ ತಲುಪಿಸಲು ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು.