ಕಳಸ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಗ್ಗೆವರೆಗೂ ಸುರಿದಿದೆ. ಭಾರಿ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಗೆ ಜನ ಬೆಚ್ಚಿಬಿದ್ದಿದ್ದಾರೆ. ಗುರುವಾರ ಸಂಜೆ ಸಾಧಾರಣವಾಗಿ ಬರುತ್ತಿದ್ದ ಮಳೆ ರಾತ್ರಿ ಇದ್ದಕ್ಕಿದ್ದಂತೆ ಜೋರಾಯಿತು. ಹಳುವಳ್ಳಿ-ಹೊರನಾಡು ರಸ್ತೆಯ ಮಾಗಲು ಎಂಬಲ್ಲಿ ಶುಕ್ರವಾರ ರಸ್ತೆ ಮಧ್ಯೆಯೇ ಕಂದಕ ನಿರ್ಮಾಣ ಆಗಿದೆ. ಅಲ್ಲದೆ ಗುಡ್ಡದ ಮಣ್ಣು ರಸ್ತೆಗೆ ಜರಿದಿದೆ.
ರಸ್ತೆ ಮಧ್ಯೆ ಉಂಟಾದ ಕಂದಕದಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಇದೇ ರಸ್ತೆ ಮೂಲಕ ಹೊರನಾಡು ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ತೆರಳುತ್ತಾರೆ. ಅವರಿಗೆ ಕಂದಕದಿಂದ ಸಮಸ್ಯೆಯಾಗಿದೆ. ಸ್ವಲ್ಪ ಯಾಮಾರಿದರೂ ಕಂದಕಕ್ಕೆ ಬೀಳುವ ಅಪಾಯವಿದೆ.