ಮೂಡಿಗೆರೆ: ತಾಲೂಕಿನಲ್ಲಿ ಬುಧವಾರದಿಂದ ಮಳೆ ಆರ್ಭಟ ಜೋರಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಭಾರೀ ಮಳೆಯಿಂದ ಕಾಫಿ ತೋಟದಲ್ಲಿ ಮರ ಉರುಳುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುತ್ತಿಲ್ಲ. ಮರ ಬಿದ್ದು ಕಸಬಾ ಗ್ರಾಮಾಂತರ, ಗೋಣಿಬೀಡು, ಬಣಕಲ್, ಬಾಳೂರು ಹೋಬಳಿಗಳಲ್ಲಿ ವಿದ್ಯುತ್ ಸಂಪರ್ಕ ನಾಲ್ಕು ದಿನದಿಂದ ಕಡಿತಗೊಂಡಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ರೈತರು ಮೇಯಲು ಜಾನುವಾರುಗಳನ್ನು ಕೊಟ್ಟಿಗೆಯಿಂದ ಹೊರಗೆ ಬಿಟ್ಟಿಲ್ಲ. ಕಳೆದ ಒಂದು ತಿಂಗಳಿನಿಂದ ಸಾಧಾರಣ ಮಳೆಯಾಗುತ್ತಿತ್ತು. ಒಮ್ಮೆಲೇ ಮಳೆ ಹೆಚ್ಚಾಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಗುರುವಾರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭವಾಗಿದ್ದರೂ ಜನ ಸೈಬರ್ನತ್ತ ಸುಳಿಯಲಿಲ್ಲ. ಕಳೆದ ಎರಡು ದಿನದಿಂದ ಪಟ್ಟಣದಲ್ಲಿ ಜನಸಂದಣಿ ಇಲ್ಲದೆ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿವೆ. ಮುಗ್ರಹಳ್ಳಿ, ಕೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ತಡೆಗೋಡೆ ಕುಸಿದಿದೆ. ಕಳಪೆ ಕಾಮಗಾರಿ ಇದಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.