ಕುಮಟಾ: ತಾಲೂಕಿನ ಕಲ್ಲಬ್ಬೆಯಲ್ಲಿ ಮಳೆ ಹೊಡೆತಕ್ಕೆ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಾರದೊಳಗಿನ ಧರೆಯೊಂದು ಕುಸಿದಿದ್ದು, ಪಕ್ಕದ ಅಂಗನವಾಡಿ ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.
ಇಲ್ಲಿನ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಛಾವಣಿಗೆ ಮರದ ಕಂಬದ ಆಸರೆ ಕೊಟ್ಟು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿಯ ಕೆಳಭಾಗದ ಧರೆ ಕುಸಿಯುವ ಸಂಭವ ಇರುವುದನ್ನು ಗಮನಿಸಿದ್ದ ಗ್ರಾಮಸ್ಥರು ಅಂಗನವಾಡಿ ಕಟ್ಟಡ ಸ್ಥಳಾಂತರಿಸಲು ಹಲವು ವರ್ಷಗಳಿಂದ ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಗುರುವಾರ ಜೋರಾದ ಮಳೆ ಹೊಡೆತಕ್ಕೆ ದರೆ ಕುಸಿದಿದೆ. ಇದರಿಂದ ಅಂಗನವಾಡಿ ಕಟ್ಟಡ ಕುಸಿದು ಕೆಳಭಾಗದಲ್ಲಿರುವ ನರಸಿಂಹ ಭಟ್ಟ ಅವರ ಮನೆಯ ಮೇಲೆ ಬೀಳುವ ಅಪಾಯ ಎದುರಾಗಿದೆ. ಯಾವಾಗ ಅವಘಡ ಸಂಭವಿಸುತ್ತದೆಯೋ ಎಂದು ಭಯದಲ್ಲಿ ಬದುಕುವಂತಾಗಿದೆ.
ಕಲ್ಲಬ್ಬೆ ಹಿ.ಪ್ರಾ. ಶಾಲೆ ಆವಾರದಲ್ಲೇ ಹೊಸದಾಗಿ ಅಂಗನವಾಡಿಗೆ ಶೀಘ್ರ ಸುಸಜ್ಜಿತ ಕಟ್ಟಡ ನಿರ್ವಿುಸಿಕೊಡಬೇಕು. ಧರೆ ಇನ್ನಷ್ಟು ಕುಸಿದು ಅಪಾಯವಾಗದಂತೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಧರೆ ಕುಸಿದಿದ್ದರಿಂದ ಅಂಗನವಾಡಿ ಕಟ್ಟಡ ಯಾವಾಗ ಬೇಕಾದರೂ ಬೀಳುವ ಹಂತದಲ್ಲಿದೆ. ಧರೆಯ ಕೆಳಗೆ ಜನವಸತಿ ಇದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದು, ಅವರು ಪಂಚನಾಮೆ ಮಾಡಿದ್ದಾರೆ. ಜಿ.ಪಂ. ಎಇ ರಾಮದಾಸ ಗುನಗಿ ಬಂದು ಪರಿಶೀಲನೆ ಮಾಡಿದ್ದಾರೆ. ಕೂಡಲೆ ಅಂಗನವಾಡಿ ಕಟ್ಟಡ ತೆರವುಗೊಳಿಸಿ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕಿದೆ.
| ಶ್ರೀಪಾದ ಹೆಗಡೆ, ಶಾಲೆ ಎಸ್ಡಿಎಂಸಿ ಅಧ್ಯಕ್ಷ