ಹನೂರು: ತಾಲೂಕಿನ ಪಳನಿಮೇಡು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಬಾಳೆ ಫಸಲು ನಾಶವಾಗಿದೆ.
ಗ್ರಾಮದ ಕುಮಾರ್ ಎಂಬುವರು 2 ಎಕರೆಯಲ್ಲಿ ಬಾಳೆ ಫಸಲು ಬೆಳೆದಿದ್ದು, ಗೊನೆಗಳು ಬಿಟ್ಟಿದ್ದವು. ಆದರೆ ರಾತ್ರಿ ಸುರಿದ ಗಾಳಿ, ಮಳೆಗೆ ಬಹುತೇಕ ಫಸಲು ನೆಲಕಚ್ಚಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತ ಕುಮಾರ್ ಒತ್ತಾಯಿಸಿದ್ದಾರೆ.