ಶಿವಮೊಗ್ಗ: ಕರೊನಾ ಆತಂಕದಿಂದ ಇದುವರೆಗೂ ದೂರವಾಗಿ ಹಸಿರು ವಲಯದಲ್ಲೇ ಗುರುತಿಸಿಕೊಂಡಿದ್ದ ಮಲೆನಾಡಿನ ಶಿವಮೊಗ್ಗಕ್ಕೂ ತಬ್ಲಿಘಿಗಳ ನಂಟು ಹಬ್ಬಿದ್ದು, ಗುಜರಾತ್ನ ಅಹಮದಾಬಾದ್ನಿಂದ ಬಂದಿರುವ 9 ತಬ್ಲಿಘಿಗಳಲ್ಲಿ 8 ಮಂದಿಗೆ ಪಾಸಿಟಿವ್ ಬಂದಿದೆ.
ಕಳೆದ ಐದು ದಿನದಲ್ಲಿ ಹೊರರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ 289 ಜನರು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿ ಬಂದಿದ್ದು, ಎಲ್ಲರನ್ನೂ ವಿವಿಧೆಡೆ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಆದರೆ ಅದರಲ್ಲಿ ಶನಿವಾರವಷ್ಟೇ ಬಸ್ ಮೂಲಕ ಗುಜರಾತ್ನಿಂದ ಬಂದ ಶಿಕಾರಿಪುರದ ಏಳು ಮತ್ತು ತೀರ್ಥಹಳ್ಳಿಯ ಒಬ್ಬರಲ್ಲಿ ಕರೊನಾ ಸೋಂಕು ಇರುವುದು ಖಚಿತಗೊಂಡಿದೆ.
ಕ್ವಾರಂಟೈನ್ನಲ್ಲಿದ್ದ ಎಲ್ಲ ಎಂಟು ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಯನ್ನು 14 ದಿನ ಪ್ರತ್ಯೇಕ ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಕಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನೇರವಾಗಿ ಗುಜರಾತ್ನಿಂದ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡು ಬಂದಿದ್ದಾರೆ. ತಬ್ಲಿಘಿಗಳ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗುತ್ತಿದೆ. ಸೋಂಕಿತರು ದೆಹಲಿಯ ತಬ್ಲಿಘ್ ಜಮಾತ್ಗೆ ಹೋಗಿರುವ ಬಗ್ಗೆ ಖಚಿತತೆ ಇಲ್ಲ. ಪಿ. 808 ರಿಂದ 815ರವರೆಗೆ ಸಂಖ್ಯೆ ನೀಡಲಾಗಿದೆ. ಆನ್ಲೈನ್ ಬುಕ್ಕಿಂಗ್ ಮಾಡಿ ಬಂದಿರುವ 289 ಜನರನ್ನು ಎಲ್ಲಿಗೂ ಹೋಗಲು ಬಿಟ್ಟಿಲ್ಲ ಎಂದು ತಿಳಿಸಿದರು.
25 ಸಿಬ್ಬಂದಿಗೂ ಕ್ವಾರಂಟೈನ್: ತಬ್ಲಿಘಿಗಳ ಪ್ರಥಮ ಸಂಪರ್ಕಕ್ಕೆ ಬಂದು ಆರೈಕೆ ಮಾಡಿರುವ 25 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕ್ವಾರಂಟೈನ್ಗೆ ಸೂಚಿಸಲಾಗಿದೆ. ವಸತಿ ನಿಲಯದ ಎಲ್ಲ ಎಂಟು ಮಂದಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಸೋಂಕು ದೃಢಪಟ್ಟ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದರು.
ಗುಜರಾತ್ನಿಂದ ಬಂದ 8 ತಬ್ಲಿಘಿಗಳಲ್ಲಿ ಪಾಸಿಟಿವ್ ಇದ್ದರೂ ಶಿವಮೊಗ್ಗ ಹಸಿರು ವಲಯದಲ್ಲೇ ಮುಂದುವರಿಯಲಿದೆ. ಜಿಲ್ಲಾಡಳಿತ, ಸರ್ಕಾರದ ನಿರ್ಧಾರದಂತೆ ಲಾಕ್ಡೌನ್ ಮುಂದುವರಿಯಲಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಮೈಮರೆಯುವಂತೆಯೂ ಇಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.