ಮಂಗಳೂರು: ನಗರದಿಂದ ಬಜ್ಪೆ ಅಂ.ರಾ.ವಿಮಾನ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಮರವೂರಿನಲ್ಲಿ ಇರುವ ಪ್ರಮುಖ ಸೇತುವೆ ಮೂರು ಅಡಿಯಷ್ಟು ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ.
ಬಜ್ಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಮೂರು ಅಡಿಯಷ್ಟು ಜಗ್ಗಿದೆ. ನದಿಯಲ್ಲಿ ನೀರು ಒಂದು ಬದಿಯಲ್ಲಿ ರಭಸದಿಂದ ಹರಿಯುತ್ತಿದ್ದು ಇದರಿಂದ ಸೇತುವೆ ಕಂಬಗಳಿಗೆ ಹಾನಿಯಾಗಿ ಸೇತುವೆ ಜಗ್ಗಿರಬಹುದು ಎಂದು ಶಂಕಿಸಲಾಗಿದೆ.
ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಆಗಮಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ರಸ್ತೆಯಲ್ಲಿ ತೆರಳುವ ವಾಹನಗಳನ್ನು ಪರ್ಯಾಯ ರಸ್ತೆ ಮೂಲಕ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ನೂತನ ಸೇತುವೆ ಕಾಮಗಾರಿ ಆರಂಭಿಕ ಹಂತದಲ್ಲಿದೆ. ಹಳೇ ಸೇತುವೆ ಬಿರುಕು ಬಿಟ್ಟು ಜಗ್ಗಿದ ಕಾರಣದಿಂದ ವ್ಯಕ್ತಿ ಹಾಗೂ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನದಿಯಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆಯಿಂದ ಸೇತುವೆಗೆ ಹಾನಿ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಡುಪಿ ಕಡೆಯಿಂದ ಬಜ್ಪೆ, ಕಟೀಲು ಕಡೆಗೆ ಬರುವವರು ಮೂಲ್ಕಿ, ಕಿನ್ನಿಗೋಳಿ ಮೂಲಕ ಬರಬೇಕಾಗಿದೆ. ಮಂಗಳೂರಿನಿಂದ ಬಜ್ಪೆ ಕಡೆಗೆ ಹೋಗುವವರು ಗುರುಪುರ, ಕೈಕಂಬ ಮೂಲಕ ಅಥವಾ ಜೋಕಟ್ಟೆ ರಸ್ತೆ ಮೂಲಕ ಸಂಚಾರ ಮಾಡಬಹುದಾಗಿದೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ.