ಎಂ.ಎಸ್. ಹಿರೇಮಠ ಸಂಶಿ
ಉದ್ಯೋಗ ಅರಸಿ ಬೆಂಗಳೂರು ಸೇರಿದ ಎಷ್ಟೋ ಯುವಕ-ಯುವತಿಯರು ತಮ್ಮೂರಿನಿಂದ ದೂರವಾಗಿದ್ದರು. ಆದರೀಗ ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿದ ಪರಿಣಾಮ ಅವರೆಲ್ಲರೂ ಹಳ್ಳಿಗಳಿಗೆ ಮರಳಿದ್ದಾರೆ.
ಹಬ್ಬ, ಜಾತ್ರೆ, ಮದುವೆ ಹೀಗೆ ಎಷ್ಟೇ ಮುಖ್ಯವಾದ ಕಾರ್ಯಕ್ರಮವಿದ್ದರೂ ಕೆಲಸದ ಕಾರಣದಿಂದ ಅನೇಕ ಯುವಕ-ಯುವತಿಯರು ತಮ್ಮನೆಯವರ ಜೊತೆಗೆ ಬೆರೆಯಲು ಆಗುತ್ತಿರಲಿಲ್ಲ. ಕಂಪನಿ ಕೆಲಸದ ಒತ್ತಡದ ನಡುವೆ ಊರಿಗೆ ಹೋಗಲು ಸಹ ಸಾಧ್ಯವಾಗುತ್ತಿರಲಿಲ್ಲ. ಈಗ ಬಹá-ತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಎಂದು ಹೇಳಿ ಉದ್ಯೋಗಿಗಳಿಗೆ ರಜೆ ನೀಡಿವೆ. ಹಾಗಾಗಿ ದುಬೈ, ಬೆಂಗಳೂರು, ಮಂಗಳೂರು, ಗೋವಾ, ಹಾಸನ ಮೊದಲಾದೆಡೆ ತೆರಳಿದವರು ತಮ್ಮೂರಿಗೆ ಹಿಂತಿರುಗಿದ್ದಾರೆ.
ವರ್ಕ ಫ್ರಂ ಹೋಮ್ ನೀಡಿದ ಕಂಪನಿ ಉದ್ಯೋಗಿಗಳು ಹಳ್ಳಿಗಳಲ್ಲಿ ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಹಳ್ಳಿಯಲ್ಲಿ ನೆಟ್ವರ್ಕ್ ಕಿರಿಕಿರಿ ನಡುವೆ, ವಿದ್ಯುತ್ ಕಣ್ಣಾಮುಚ್ಚಾಲೆಯನ್ನು ಸಹಿಸಿಕೊಂಡು ಅನಿವಾರ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಗರಿಗೆ ಈ ಯುವಕರ ಲ್ಯಾಪ್ಟಾಪ್ ಆಟಿಕೆಯಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಎ.ಸಿ. ರೂಮ್ನಲ್ಲಿ ಕೂತು ಕೆಲಸ ಮಾಡುವ ಯುವಕರಿಗೆ ತಮ್ಮ ಹಳ್ಳಿಯ ತೊಂದರೆಗಳು ಈಗ ಅರ್ಥವಾಗುತ್ತಿವೆ.
ಊರಿಗೆ ಬನ್ನಿ ಎಂದರೆ ಕಾರಣ ಹೇಳುತ್ತಿದ್ದ ಮಕ್ಕಳು ಈಗ ಕರೊನಾ ಭೀತಿಯಿಂದ ಮನೆಗೆ ಹಿಂದಿರುಗಿದ್ದನ್ನು ಕಂಡು ತಂದೆ-ತಾಯಿ ಸಂತಸಗೊಂಡಿದ್ದಾರೆ. ಕರೊನಾ ಕಾಟ ಮುಗಿಯುವವರೆಗೆ ಬೆಂಗಳೂರು ಕಡೆ ಮುಖ ಮಾಡಬೇಡ ಎಂಬುದು ಕುಟುಂಬ ಸದಸ್ಯರ ಆರೋಗ್ಯ ಕಾಳಜಿ. ನಗರಗಳಲ್ಲಿ ಕೆಲಸ ಮಾಡುವಾಗ ಸಮಯಕ್ಕೆ ಸರಿಯಾಗಿ ಊಟ ಮಾಡಲಾಗದೆ ಪರಿತಪಿಸುತ್ತಿದ್ದ ಹಲರಿಗೆ ಈಗ ಹಳ್ಳಿಯಲ್ಲಿ ಮನೆಯೂಟದ ರುಚಿ, ತಾಯಿ ಉಪಚಾರ ಸಿಗುತ್ತಿದೆ.
ಕರೊನಾ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತಿತರ ನಗರಗಳಿಂದ ಸಂಶಿ ಗ್ರಾಮಕ್ಕೆ ಹಿಂದಿರುಗಿ ಬಂದ ಉದ್ಯೋಗಸ್ಥರಿಗೆ ಡಾ. ಎಸ್.ಬಿ. ತುಕ್ಕಣ್ಣವರ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
ಕರೊನಾ ತಡೆಗಟ್ಟುವ ಸಲುವಾಗಿ ದೇಶಾದ್ಯಂತ 21 ದಿನ ಲಾಕ್ಡೌನ್ ಘೊಷಿಸಲಾಗಿದೆ. ಅದರಿಂದಾಗಿ ಎಲ್ಲ ಕಂಪನಿಗಳು ರಜೆ ನೀಡಿವೆ. ಸಾಫ್ಟ್ವೇರ್ ಕಂಪನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಿವೆ. ರಜೆ ನೀಡಿದರೂ ನಾನು ಗ್ರಾಮಕ್ಕೆ ಬಂದು ಇಲ್ಲಿಂದಲೇ ಲ್ಯಾಪ್ಟಾಪ್ ಮೂಲಕ ಕೆಲಸ ಮಾಡುತ್ತಿದ್ದೇನೆ. | ರಾಕೇಶ ಕುಂಬಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ, ಸಂಶಿ