ನಾಪೋಕ್ಲು: ಕೂರುಳಿ ಸಮೀಪ ವಾಸವಾಗಿರುವ ಕೂಲಿ ಕಾರ್ಮಿಕ ಅರಮನೆ ಪಾಲೆ ಅಪ್ಪು ಅವರ ಮಗ ಭೀಮಯ್ಯ ಎಂಬುವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ.
ಗಾಳಿ ಮಳೆಗೆ ಗುರುವಾರ ನಸುಕಿನಲ್ಲಿ ಮನೆಯ ಸಮೀಪವಿರುವ ಕೊಂಬಂಡ ಗೀತಾ ಎಂಬುವರ ಕಾಫಿ ತೋಟದಲ್ಲಿದ್ದ ಭಾರಿ ಗಾತ್ರದ ಉಪ್ಪುಲಿ ಎಂಬ ಮರ ಬೀಳುವಾಗ ಭೀಮಯ್ಯ ಅವರ ವಾಸದ ಮನೆ ಒಂದು ಭಾಗ, ಬಚ್ಚಲು ಮನೆ ಮತ್ತು ಕೋಳಿಗೂಡು ಹಾನಿಯಗಿ ನಷ್ಟ ಸಂಭವಿಸಿದೆ.
ಮರ ಬೀಳುವಾಗ ಭೀಮಯ್ಯ ಮತ್ತು ಪತ್ನಿ, ಮಕ್ಕಳು ಮನೆಯೊಳಗಿದ್ದರು. ಆದರೆ ಪ್ರಾನಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದಿದ್ದರಿಂದ ಛಾವಣಿ ಶೀಟ್ಗಳು ಪುಡಿಯಾಗಿ ಮನೆಯ ಒಳಗಿದ್ದ ವಸ್ತುಗಳಿಗೆ ಹಾನಿಯಾಗಿವೆ. ಅಲ್ಲದೆ ಕೋಳಿಗೂಡಿನಲ್ಲಿದ್ದ ಮೂರು ಕೋಳಿಗಳು ಬಿದ್ದ ರಭಸಕ್ಕೆ ಸತ್ತಿವೆ.
ವಿಷಯ ತಿಳಿದ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಪ ಬಿ.ಎಂ, ಶಿವಚಳಿಯಂಡ ಜಗದೀಶ್, ಗ್ರಾಮಸ್ಥರಾದ ಪಾಡಿಅಮ್ಮಟಡ ಮನು ಮಹೇಶ್, ಕಂಗಂಡ ಜಾಲಿ ಪೂವಪ್ಪ, ಕುಂಬಂಡ ತಿಮ್ಮಯ್ಯ, ಕೊಂಬಂಡ ಧನಂಜಯ, ಪ್ರಕಾಶ್, ದರ್ಶನ್ ಹಾಗೂ ಇನ್ನಿತರರು ಮಳೆಯನ್ನೂ ಲೆಕ್ಕಿಸದೆ ಮನೆಗೆ ಬಿದ್ದ ಮರದ ಕೊಂಬೆಗಳನ್ನು ಕತ್ತರಿಸಿ ಛಾವಣಿಗೆ ಹೊಸ ಶೀಟ್ಗಳ ಅಳವಡಿಸಿ ಮಾನವೀಯತೆ ಮೆರೆದರು.
ಉಪ ತಹಸೀಲ್ದಾರ್ ಸುನಿಲ್ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಅಮೃತಾ ಭೇಟಿ ನೀಡಿ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸಿದರು.
=====================================================