ವಿಜಯವಾಣಿ ಸುದ್ದಿಜಾಲ ಕೋಲಾರ
ಹೊಟ್ಟೆ ಹೊರೆಯಲು ಹುಲ್ಲು ಮೇಯುತ್ತಾ ಮದ್ದಿನ ಉಂಡೆ ತಿಂದ ಸೀಮೆಹಸು ಸಾವನ್ನಪ್ಪಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹೊಸೂರು ಗ್ರಾಮದ ಹೊರವಲಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ರೈತ ಶ್ರೀನಿವಾಸ್ ಎಂಬುವರು ಶುಕ್ರವಾರ ಬೆಳಗ್ಗೆ ಸೀಮೆಹಸುವನ್ನು ಬಯಲು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಗುರುವಾರ ರಾತ್ರಿ ಕಳ್ಳಬೇಟೆಗಾರರು ಕಾಡುಹಂದಿಗಾಗಿ ಇಟ್ಟಿದ್ದ ಮದ್ದಿನ ಉಂಡೆಯನ್ನು ಹಸು ತಿಂದಿದೆ. ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಸೀಮೆಹಸುವಿನ ಬಾಯಿ ಛಿದ್ರಛಿದ್ರವಾಗಿದ್ದು, ಸೀಮೆಹಸು ಸಾವುನ್ನಪ್ಪಿದೆ. ಸ್ಥಳಕ್ಕೆ ಬಂಗಾರಪೇಟೆ ಪಿಎಸ್ಐ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ತಾಲೂಕಿನಲ್ಲಿ ಕಾಡುಹಂದಿ ಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದು, ಕಳ್ಳಬೇಟೆಗಾರರು ಕಾನೂನು ಉಲ್ಲಂಘಿಸಿ ಪ್ರಾಣಹಾನಿಯಂತಹ ಸ್ಫೋಟಕಗಳನ್ನು ಬಳಸುತ್ತಿರುವುದಕ್ಕೆ ಮೇವು ತಿನ್ನಲು ಹೋಗುವ ಸೀಮೆಹಸು ಬಲಿಯಾಗಿರುವುದೇ ನಿದರ್ಶನವಾಗಿದೆ.