ಚಿತ್ರದುರ್ಗ: ಜಿಲ್ಲೆಗೆ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸ್ನೇಹಿತರು, ಹಿತೈಷಿಗಳ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಿಸಲು ನಿವೃತ್ತ ಅಧಿಕಾರಿ ಶ್ರೀರಂಗಯ್ಯ ಒಲವು ತೋರಿದ್ದಾರೆ.
ಜಿಲ್ಲೆಯ ಆರು, ಲೋಕಸಭಾ ಕ್ಷೇತ್ರವೂ ಸೇರಿ ಎಂಟು ತಾಲೂಕುಗಳ ಜನರು, ಮುಖಂಡರು, ಜನಪ್ರತಿನಿಧಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಹೀಗಾಗಿ ಈ ಬಾರಿ ಸ್ಪರ್ಧಿಸುವಂತೆ ಆತ್ಮೀಯರು ಒತ್ತಾಯಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದುರ್ಗ ಡಿಸಿಯಾಗಿದ್ದ ಅವಧಿಯಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅಲ್ಲದೆ, ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದ ಪರಿಚಯವಿದ್ದು, ಇಲ್ಲಿನ ಆಗು-ಹೋಗು ಬಲ್ಲವನಾಗಿದ್ದೇನೆ. ಜನಪರ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೂ ರಾಜಕೀಯ ಪ್ರವೇಶಿಸಲು ಬಯಸಿದ್ದೇನೆ ಎಂದರು.
ನಾನೂ ಹೊರಗಿನವನಲ್ಲ, ಗಡಿ ಭಾಗದಲ್ಲಿ ನಮ್ಮ ಕುಟುಂಬವಿದೆ. ಎಸ್ಸಿ ಎಡಗೈ ಸಮುದಾಯದ ನಾಲ್ಕೈದು ಲಕ್ಷ ಮತಗಳಿದ್ದು, ಅದು ಗೆಲುವಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಮೋಹನ್, ಗ್ರಾಪಂ ಸದಸ್ಯ ರಂಗಯ್ಯ ಇದ್ದರು.