ದಾವಣಗೆರೆ: ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದನ್ನು ವಿಶ್ವ ಹಿಂದು ಪರಿಷದ್-ಕರ್ನಾಟಕದ ಜಿಲ್ಲಾ ಸಮಿತಿ ಖಂಡಿಸಿದೆ.
ಭಾರತ ಹಿಂದು ರಾಷ್ಟ್ರವಾಗಿದೆ. ಕರ್ನಾಟಕವೂ ಅದರ ಭಾಗವಾಗಿದ್ದು ಅನ್ಯ ಧರ್ಮೀಯರು ಸಹಬಾಳ್ವೆ ಹಾಗೂ ಧರ್ಮ ಮತಾಚರಣೆ ಮಡಲು ಅವಕಾಶವಿದೆ. ಆದರೆ ಹೆದರಿಸಿ ಅಥವಾ ಬಲವಂತವಾಗಿ ಹಾಗೂ ಆಮಿಷ ತೋರಿಸಿ ಮರಳು ಮಾಡಿ ಮತಾಂತರಿಸುವುದು ಸರಿಯಲ್ಲ ಎಂದು ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಪ್ರೊ. ಎಂ.ಬಿ.ಪುರಾಣಿಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಗಳು ಕೂಡ ಕಾಂಗ್ರೆಸ್ಗೆ ಮತ ನೀಡಿದ್ದಾರೆ, ಕೇವಲ ಅಲ್ಪಸಂಖ್ಯಾತರಿಂದ ಗೆದ್ದಿಲ್ಲ. ಹಾಗಾಗಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಶಾಲಾ ಪಠ್ಯದಲ್ಲಿ ರಾಷ್ಟ್ರಪುರುಷರು ಹಾಗೂ ಸಾವರ್ಕರ್ನಂಥ ದೇಶಭಕ್ತರ ಪರಿಚಯದ ಪಾಠಗಳನ್ನು ಶಾಲಾ ಪಠ್ಯದಿಂದ ಕೈಬಿಡಲು ನಿರ್ಧರಿಸಿರುವುದೂ ಕೂಡ ಖಂಡನಾರ್ಹ.
ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಆಕ್ಷೇಪಾರ್ಹ. ಸಮಾಜದಲ್ಲಿ ಶಾಂತಿ ಕದಡುವ ನಿರ್ಧಾರಗಳನ್ನು ಕೈಬಿಡಲು ಆಗ್ರಹಿಸಿ ಜೂ.21ರಂದು ಜಯದೇವ ವೃತ್ತದಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸಂಘ ಪರಿವಾರದ ಮುಖಂಡ ಬೇಕರಿ ರಾಜು ಮಾತನಾಡಿ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಕೆಲವು ವರ್ಗದವರು ಪ್ರತಿಭಟನೆ ಮಾಡಿದರು. ಆದರೆ ಕಾಂಗ್ರೆಸ್ ಈ ಕಾಯ್ದೆ ಹಿಂಪಡೆಯಲು ನಿರ್ಧಾರ ಪ್ರಕಟಿಸಿದಾಗ ರಾಜ್ಯದ ಯಾವೊಬ್ಬ ಸ್ವಾಮೀಜಿಗಳೂ ಧ್ವನಿ ಎತ್ತಲಿಲ್ಲ. ಹೀಗಾದರೆ ಸ್ವಾಮೀಜಿಗಳನ್ನು ಗೌರವಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಪಠ್ಯದಿಂದ ದೇಶಭಕ್ತರ ಪಾಠ ಕೈಬಿಡುತ್ತಿರುವ ಸರ್ಕಾರದ ನಿರ್ಧಾರವನ್ನು ಸಂಘ ಪರಿವಾರ ಪ್ರಶ್ನಿಸುವುದಕ್ಕಿಂತಲೂ ಸಾಮಾನ್ಯರು ಪ್ರಶ್ನೆ ಮಾಡಬೇಕು. ದಾವಣಗೆರೆಯಲ್ಲಿ ಕಳೆದ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಪರಶುರಾಮನ ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ದೂರು ಸಲ್ಲಿಸಿದ್ದರೂ ಬಸವನಗರ ಠಾಣೆ ಪೊಲೀಸರು ಇದುವರೆಗೆ ಕ್ರಮ ಕೈಗೊಂಡಿಲ್ಲ. ಆರು ಮಂದಿ ಹಿಂದು ಕಾರ್ಯಕರ್ತರ ವಿರುದ್ಧ ಇತ್ತೀಚೆಗೆ ದೂರು ದಾಖಲಿಸಿ ನೋಟಿಸ್ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೈ.ಮಲ್ಲೇಶ್, ಕಲ್ಯಾಣಮ್ಮ, ಮಲ್ಲಿಕಾರ್ಜುನ, ಪ್ರಭು ಕಲಬುರಗಿ, ಸಿದ್ದೇಶ, ಕುಮಾರ್, ಉಮೇಶ್ ಇದ್ದರು.