ಚಿತ್ರದುರ್ಗ: ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಮುಂದುವರೆದಿದ್ದು, ನಿಯಂತ್ರಿಸಲಾಗದ ಅಲ್ಲಿನ ಮುಖ್ಯಮಂತ್ರಿ ಎನ್.ಬೀರೆನ್ಸಿಂಗ್ ಮತ್ತು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆರವಣಿಗೆ ನಡೆಸಿದರು. ಮಣಿಪುರ ಸಿಎಂ, ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿದರು. ಶಾಂತಿ, ಸುವ್ಯವಸ್ಥೆ ಕಾಪಾಡಲು ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ದೇಶದೊಳಗೆ ರಕ್ಷಣೆ ಇಲ್ಲವಾಗಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮ ವಹಿಸುವಲ್ಲೂ ಅಲ್ಲಿನ ಸರ್ಕಾರ ವಿಫಲವಾಗಿದೆ. ಪ್ರಧಾನಿ ಮೌನಕ್ಕೆ ಜಾರಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು. ಅದಕ್ಕಾಗಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಷ್ಟ್ರಪತಿ ಅವರಿಗೆ ಕೋರಿದರು.
ಸಮಿತಿ ಪದಾಧಿಕಾರಿಗಳಾದ ಕೆಂಗುಂಟೆ ಜಯಪ್ಪ, ನವೀನ್ ಮದ್ದೇರು, ಕೆ.ಆರ್.ಸುಂದರಮೂರ್ತಿ, ಮಂಜುನಾಥ ಗುಂಡಿಮಡು, ಶ್ರೀನಿವಾಸ್ ಬಂಡೆಹಟ್ಟಿ, ಎನ್.ಪ್ರಭಾಕರ್, ಬಸವರಾಜು, ನಾಗರಾಜ, ಹರೀಶ, ರಮೇಶ, ಆಕಾಶ್, ಮರಿಕುಂಟೆ ಮಹಾಲಿಂಗಪ್ಪ, ಸುರೇಶ್, ರುದ್ರಮುನಿ ಇತರರಿದ್ದರು.