ಸೊರಬ: ಭಕ್ತರ ಪ್ರೀತಿ, ವಿಶ್ವಾಸ ಹಾಗೂ ಸಹಾಯದಿಂದ ಮಠಗಳು ಕಾರ್ಯ ನಿರ್ವಹಿಸುತ್ತಿವೆ. ಭಕ್ತ ಸಮೂಹ ಇಲ್ಲದಿದ್ದರೆ ಮಠಗಳು ಒಳ್ಳೆಯ ಹೆಸರು ಹೊಂದಲು ಸಾಧ್ಯವಿಲ್ಲ. ಮಠದಲ್ಲಿ ಸ್ವಾಮೀಜಿಗಳು ನಿಮಿತ್ತ ಮಾತ್ರ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಸೋಮವಾರ ಪಟ್ಟಣದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ 15ನೇ ಹಾಗೂ ಮುರಘಾಮಠದ ನೂತನ ಕಟ್ಟಡ ಪ್ರವೇಶೋತ್ಸವದ 12ನೇ ವಾರ್ಷಿಕೋತ್ಸವ, 206ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಮಠಗಳು ಭಕ್ತರ ಹೃದಯದಲ್ಲಿ ನೆಲೆಸಿದರೆ, ಕಾಯಕ ಹಾಗೂ ಭಕ್ತಿಯಲ್ಲಿ ಶ್ರದ್ಧೆ ತೋರಿದರೆ ಎಲ್ಲ ಮಠಗಳು ಶ್ರೀಮಂತಗೊಳ್ಳಲಿವೆ. ಮುರುಘಾಮಠ ನಿರ್ಮಾಣವಾಗಲು ಭಕ್ತರು, ಜನಪ್ರತಿನಿಧಿಗಳು ತಮ್ಮದೆ ಆದ ಸಹಕಾರ ನೀಡಿದ್ದಾರೆ ಎಂದರು.
ಯೋಗದಿಂದ ಕೆಲಸಕಾರ್ಯಗಳು ನಡೆಯುತ್ತವೆ. ಜಗತ್ತಿನಲ್ಲಿ ಭಗವಂತ ಎಲ್ಲಾ ಅವಕಾಶಗಳನ್ನು ನೀಡಿದ್ದು ಅವುಗಳನ್ನು ಸದುಯೋಪಯೋಗ ಪಡಿಸಿಕೊಳ್ಳುವ ಮಾರ್ಗ ಉತ್ತಮವಾಗಿರಬೇಕು. ಧರ್ಮದ ಪಾಲು ಇದ್ದರೆ ಸಂಪತ್ತು ಹುಡುಕಿಕೊಂಡು ಬರುತ್ತದೆ. ಧರ್ಮದ ಪಾಲು ಸಲ್ಲಿಸಲು ಕ್ರಿಯೆ, ಜ್ಞಾನ ಮುಖ್ಯ. ಆದ್ದರಿಂದಲೇ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಾಗಿ ನೋಡಲಾಗುತ್ತದೆ. ದಾನ ಮಾಡಿದರೆ ಸಂಪತ್ತು ಲಭಿಸುತ್ತದೆ. ಒಳ್ಳೆಯ ನಡತೆ, ಸದ್ಗುಣಗಳನ್ನು ಹೊಂದಿದರೆ ಸಾರ್ಥಕ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೂಸನೂರು ತಿಪ್ಪೇಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗ ಸ್ವಾಮೀಜಿ ಮಾತನಾಡಿ, ಜಡೆ ಮಠವನ್ನು ಭಕ್ತರ ನಡುವೆ ಜನಪ್ರಿಯಗೊಳಿಸಿದ ಕೀರ್ತಿ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದರು. ಸೇವೆ ಮಾಡುವ ಮನೋಭಾವ ಎಲ್ಲರಿಗೂ ಶಕ್ತ್ಯಾನುಸಾರ ಬಂದಾಗ ಸಮಾಜ ಬದಲಾವಣೆಗೆ ಒಳಗೊಳ್ಳುತ್ತದೆ ಎಂದು ಡಾ. ಜ್ಞಾನೇಶ್ ಹೇಳಿದರು.
ಫೆ.4 ಮತ್ತು 5ರಂದು ಜಡೆ ಮಠದಲ್ಲಿ ನಡೆಯುವ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿಗಳ ರಥೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಕ್ಕನ ಬಳಗದ ಸದಸ್ಯರು ಭಜನೆ ನಡೆಸಿಕೊಟ್ಟರು.