ಮೈಸೂರು : ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ ಎಂದು ಶಂಕಿಸಿ ಪತಿ ವ್ಯಕ್ತಿಯನ್ನು ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಗ್ರಾಮದ ಮಹೇಶ್(30) ಮೃತ ವ್ಯಕ್ತಿ. ಸರಗೂರು ತಾಲೂಕಿನ ಮೊಳೆಯೂರು ಗ್ರಾಮದ ಗಿರೀಶ್ ಹತ್ಯೆಗೈದವ.
ತನ್ನ ಪತ್ನಿಯೊಂದಿಗೆ ಮೃತ ಮಹೇಶ್ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ ಎಂದು ಶಂಕಿಸಿ ಗಿರೀಶ್ ಶುಕ್ರವಾರ ಸಂಜೆ ಅಟೋರಿಕ್ಷಾದಲ್ಲಿ ಕೂತಿದ್ದ ವೇಳೆ ಮಚ್ಚು ತೆಗೆದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತತನ್ನು ರಕ್ಷಿಸಲು ಮುಂದಾದರೂ ಅಷ್ಟರಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಬಳಿಕ ಕೊಲೆ ಆರೋಪಿ ಗಿರೀಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.