More

    ಮಗನ ಔಷಧಕ್ಕಾಗಿ ತಾಯಿಯ ಗೋಳಾಟ

    ರಾಣೆಬೆನ್ನೂರ: ಲಾಕ್​ಡೌನ್ ಹಿನ್ನೆಲೆಯಲ್ಲಿ ಮೂರುವರೆ ವರ್ಷದ ಕಂದಮ್ಮನ ಔಷಧಕ್ಕಾಗಿ ತಾಯಿಯೊಬ್ಬಳು ಪರದಾಡುತ್ತಿದ್ದಾಳೆ. ‘ನನ್ನ ಮಗನಿಗೆ ಔಷಧ ತರಿಸಿಕೊಟ್ಟು ಆತನ ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ವಾಟ್ಸ್​ಆಪ್, ಫೇಸ್​ಬುಕ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ವಿಡಿಯೋ ಮಾಡಿದ ಒಂದು ಗಂಟೆಯಲ್ಲಿ ಬ್ಯಾಡಗಿ ಸರ್ಕಾರಿ ಆಸ್ಪತ್ರೆ ವೈದ್ಯರು ಮಣಿಪಾಲದಿಂದ ಔಷಧ ತರಿಸಿಕೊಡುವ ಭರವಸೆ ನೀಡಿದ್ದಾರೆ.

    ಇಲ್ಲಿಯ ರಂಗನಾಥ ನಗರದ ನಿವಾಸಿ ಜ್ಯೋತಿ ಮಡಿವಾಳರ ಔಷಧಕ್ಕಾಗಿ ಮನವಿ ಮಾಡಿಕೊಂಡವರು. ಇವರ ಮೂರೂವರೆ ವರ್ಷದ ಮಗ ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯ ವೈದ್ಯರು, ಥಯಾಮಿನ್ ಹೈಡ್ರೋಕ್ಲೋರೈಡ್ ಮತ್ತು ರಿಬೋಫ್ಲಾವಿನ್ ಸಿರಫ್ ಔಷಧ ಕೊಟ್ಟು ನಿತ್ಯ ತೆಗೆದುಕೊಳ್ಳಲು ತಿಳಿಸಿದ್ದರು.

    ಅದರಂತೆ ತಾಯಿ ಜ್ಯೋತಿ ಕಳೆದ ಒಂದು ವರ್ಷದಿಂದ ಮಗನಿಗೆ ನಿತ್ಯ ಔಷಧ ಕೊಡುತ್ತಿದ್ದರು. ಆದರೆ, ಮಾರ್ಚ್ ಕೊನೆಗೆ ಔಷಧ ಸಂಪೂರ್ಣ ಖಾಲಿಯಾಗಿದೆ. 15 ದಿನದಿಂದ ನಗರದ ಎಲ್ಲ ಔಷಧ ಅಂಗಡಿಗಳಲ್ಲಿ ಹುಡುಕಿದರೂ ಔಷಧ ದೊರೆತಿಲ್ಲ. ನಂತರ ಔಷಧ ಮಣಿಪಾಲ ಆಸ್ಪತ್ರೆ ಹೊರತು ಪಡಿಸಿ ಬೇರೆಲ್ಲೂ ದೊರಕುವುದಿಲ್ಲ ಎಂಬುದು ತಿಳಿದುಬಂತು.

    ಆದರೆ, ಮಣಿಪಾಲಗೆ ಹೋಗಿ ಬರಲು ಜ್ಯೋತಿಯವರ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗ ಕೂಡ ಕಿರಿಕಿರಿ ಮಾಡತೊಡಗಿದ್ದಾನೆ. ಇದರಿಂದ ನೊಂದಿರುವ ಜ್ಯೋತಿ, ತನ್ನ ಸಂಕಷ್ಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಒಂದೇ ಗಂಟೆಯಲ್ಲಿ ಸ್ಪಂದಿಸಿದ ವೈದ್ಯ: ಜ್ಯೋತಿ ಮಡಿವಾಳರ ವಿಡಿಯೋ ಹಾಕಿ ಒಂದು ಗಂಟೆಯಲ್ಲಿ ಬಹಳಷ್ಟು ವಾಟ್ಸ್​ಆಪ್ ಗ್ರುಪ್​ಗಳಿಗೆ ಫಾರ್ವರ್ಡ್ ಮಾಡಲಾಗಿದೆ. ಇದನ್ನು ನೋಡಿದ ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜ, ಮಣಿಪಾಲದಿಂದ ಔಷಧ ತರಿಸಲು ವ್ಯವಸ್ಥೆ ಮಾಡಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ತಮಗೆ ಪರಿಚಯ ವಿರುವ ಕಾರಣ ತಮ್ಮ ಆಸ್ಪತ್ರೆ ಸಿಬ್ಬಂದಿಯನ್ನು ಮಣಿಪಾಲಗೆ ಕಳುಹಿಸಿಕೊಟ್ಟಿದ್ದಾರೆ. ಏ. 16ರ ರಾತ್ರಿಯೊಳಗೆ ಔಷಧ ತಮ್ಮ ಕೈ ಸೇರಲಿದೆ ಎಂದು ಜ್ಯೋತಿ ಅವರಿಗೆ ಭರವಸೆ ನೀಡಿ, ಧೈರ್ಯ ತುಂಬಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts