ಸಾಗರ: ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕೃತಿ, ಸಂಸ್ಕಾರವನ್ನು ಪರಿಚಯಿಸಬೇಕು ಎಂದು ಉಪನ್ಯಾಸಕ ಕೆ.ಎಂ.ರವೀಂದ್ರ ಕಿವಿಮಾತು ಹೇಳಿದರು.
ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯತರಂಗ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಋತು ನೃತ್ಯ ವೈವಿಧ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ವಾನ್ ಜನಾರ್ದನ್ ಮಕ್ಕಳಲ್ಲಿರುವ ನೃತ್ಯ ಪ್ರತಿಭೆಯನ್ನು ಪೋಷಿಸುವ ಮೂಲಕ ಅವರಲ್ಲಿ ಕಲಾಸಕ್ತಿಯನ್ನು ಬೆಳೆಸುವ ಕೆಲಸವನ್ನು ಎರಡೂವರೆ ದಶಕದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನೃತ್ಯದ ಜತೆ ಬದುಕಿನ ಮೌಲ್ಯ ಕಲಿಸುವ ಶ್ರೇಷ್ಠ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ನಾಟ್ಯತರಂಗ ಸಂಸ್ಥೆ ಪ್ರಾಚಾರ್ಯ ವಿದ್ವಾನ್ ಜಿ.ಬಿ.ಜನಾರ್ದನ್, ಭಾರತೀಯ ಸಂಸ್ಕೃತಿಯನ್ನು ಕಲಾ ಮಾಧ್ಯಮದ ಮೂಲಕ ಪ್ರಚುರಪಡಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ನೃತ್ಯ ಕಲಿತು ಇತರರಿಗೆ ನೃತ್ಯಾಭ್ಯಾಸ ಮಾಡಿಸುತ್ತಿರುವುದು ಸಂಸ್ಥೆಯ ಹೆಮ್ಮೆ ಎಂದು ತಿಳಿಸಿದರು.
ಕಲಾಧ್ಯಾನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ನಾಟ್ಯತರಂಗ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ರಂಜನಾ ಮತ್ತು ವೈಷ್ಣವಿ ಅದ್ವಯ್ ಅವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು. ಸಿಂಚನಾ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಅನುಷಾ ಹೆಗಡೆ ನಿರೂಪಿಸಿದರು.