ಹುಬ್ಬಳ್ಳಿ : ಮೇಕೆದಾಟು ಯೋಜನೆ ನಿಲ್ಲಿಸುತ್ತೇವೆ ಎಂದಿರುವ ಡಿಎಂಕೆ ಹೇಳಿಕೆ ಖಂಡನೀಯ. ಡಿಎಂಕೆಯ ಈ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಇತರ ಕಾಂಗ್ರೆಸ್ ನಾಯಕರು ಖಂಡಿಸುವರೇ ? ಈ ಯೋಜನೆ ಬಗ್ಗೆ ಕಾಂಗ್ರೆಸ್ನ ನಿಲುವು ಏನು ? ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೋಶಿ, ಮೇಕೆದಾಟು ಯೋಜನೆ ಬಗ್ಗೆ ಅಪಸ್ವರ ಎತ್ತಿರುವ ಡಿಎಂಕೆ ಪಕ್ಷವನ್ನು ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಕೈ ಬಿಡುವುದೇ ಎಂದು ಕೇಳಿದರು.
ಕಾಂಗ್ರೆಸ್ನವರು ನಮ್ಮ ನೀರು, ನಮ್ಮ ಹಕ್ಕು ಘೋಷವಾಕ್ಯದಡಿ ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದರು. ಈಗ ಕಾಂಗ್ರೆಸ್ನವರು ಏನು ಹೇಳುತ್ತಾರೆ ? ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ದುರಹಂಕಾರದಿಂದಾಗಿ ಸಮನ್ಸ್ಗೆ ಉತ್ತರ ನೀಡಲಿಲ್ಲ. ಹೀಗಾಗಿ, ಅವರ ಬಂಧನವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ನವರು ಸರಿಯಾಗಿ ತೆರಿಗೆ ಪಾವತಿಸಿಲ್ಲ. ಈ ಕಾರಣದಿಂದ ಆ ಪಕ್ಷದ ಬ್ಯಾಂಕ್ ಖಾತೆ ಸೀಜ್ ಆಗಿದೆ. ಆದಾಯ ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದರು.
ಕಾಂಗ್ರೆಸ್ ಅನ್ನು ನಾವು ಶಕ್ತಿಹೀನಗೊಳಿಸುವ ಅಗತ್ಯ ಇಲ್ಲ. ಆ ಪಕ್ಷವನ್ನು ಜನರೇ ಶಕ್ತಿಹೀನಗೊಳಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಬಳಿ ಸಮರ್ಪಕ ಅಭ್ಯರ್ಥಿಗಳೇ ಇಲ್ಲ. ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದೇ ಆ ಪಕ್ಷದ ಸಾಧನೆ. ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ವಿಜಯ ಸಾಧಿಸಲಿದೆ ಎಂದು ಹೇಳಿದರು.
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗೆ ಇದೆ ಎಂದ ಪ್ರಲ್ಹಾದ ಜೋಶಿ, ಈ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕೆ ಇಳಿಯುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಂದೆ ನೋಡೋಣ ಎಂದರು.