More

    ಭೂಗಳ್ಳರಿಗೆ ಅಧಿಕಾರಿಗಳ ಶಾಕ್

    ಸಾಗರ: ಪಟ್ಟಣದ ಬಳಸಗೋಡು ಸರ್ವೆ ನಂ.36ರಲ್ಲಿ ಒತ್ತುವರಿ ಆಗಿದ್ದ 6 ಎಕರೆ ಜಾಗವನ್ನು ನಗರಸಭೆ ಆಡಳಿತ ಪೌರಾಯುಕ್ತ ಎಚ್.ಕೆ.ನಾಗಪ್ಪ ಹಾಗೂ ರಾಜಸ್ವ ನಿರೀಕ್ಷಕ ಆನಂದ್ ನಾಯ್ಕ ನೇತೃತ್ವದಲ್ಲಿ ಭಾನುವಾರ ತೆರವುಗೊಳಿಸಲಾಯಿತು.

    ಈ 6 ಎಕರೆ ಸರ್ಕಾರಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲು ಇರಿಸಲಾಗಿತ್ತು. ಆದರೆ ಈ ಜಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಕೆಲವರು ಸಾಗುವಳಿ ಮಾಡಿ, ಮನೆ ನಿರ್ಮಾಣ ಸೇರಿ ಇನ್ನಿತರೆ ಚಟುವಟಿಕೆ ಕೈಗೊಳ್ಳುವ ಮೂಲಕ ಒತ್ತುವರಿಗೆ ಪ್ರಯತ್ನ ನಡೆಸಿದ್ದರು.

    ಹಾಲಿ ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವ ಜಾಗದ ಪಕ್ಕದಲ್ಲಿ ಖಾಸಗಿ ಲೇಔಟ್ ಇದೆ. ಇಲ್ಲಿ 6 ಎಕರೆ ಸರ್ಕಾರಿ ಜಾಗದ ಜತೆಗೆ 2 ಎಕರೆ ನಗರಸಭೆ ಜಾಗವೂ ಇದೆ. ಕಳೆದ ವರ್ಷ ಕೆಲ ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ್ದ ನಿವೇಶನದಲ್ಲಿ 18 ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆಯು ಮನೆಗಳನ್ನು ನೆಲಸಮ ಮಾಡಿತ್ತು.

    ನಗರ ವ್ಯಾಪ್ತಿಯಲ್ಲಿರುವ ನಗರಸಭೆ ಜಾಗವನ್ನು ಗುರುತಿಸಿ ಬೇಲಿ ಹಾಕುವಂತೆ ಶಾಸಕ ಹರತಾಳು ಹಾಲಪ್ಪ ಎಸ್​ಎಫ್​ಸಿ ವಿಶೇಷ ಅನುದಾನದಲ್ಲಿ 30 ಲಕ್ಷ ರೂ. ನೀಡಿದ್ದರು. ಆದರೆ ನಗರಸಭೆ ಅಧಿಕಾರಿಗಳು ಜಾಗ ಗುರುತಿಸಿ ಬೇಲಿ ಹಾಕದೆ ಇರುವುದಕ್ಕೆ ಶಾಸಕರು ನಗರಸಭೆ ಪೌರಾಯುಕ್ತರನ್ನು ಸೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ಒತ್ತುವರಿ ತೆರವು ಮಾಡಲಾಗಿದೆ. ಜಾಗ ಕಬಳಿಕೆಗೆ ನಿರ್ವಿುಸಿದ್ದ ಕಾಂಪೌಂಡ್​ಗಳನ್ನು ಒಡೆದು ಹೊಸದಾಗಿ ನಗರಸಭೆಯಿಂದ ಬೇಲಿ ನಿರ್ವಿುಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

    ನಗರಸಭೆ ವ್ಯಾಪ್ತಿಯಲ್ಲಿ ದಿಢೀರನೇ ಪೌರಾಯುಕ್ತರ ನೇತೃತ್ವದ ತಂಡ ಭಾನುವಾರದಿಂದ ಅಕ್ರಮ ಭೂ ಒತ್ತುವರಿ ತೆರವಿಗೆ ಮುಂದಾಗಿರುವುದು ಭೂಗಳ್ಳರಿಗೆ ತಲೆನೋವಾಗಿ ಪರಿಣಮಿಸಿದೆ. ಪೌರಾಯುಕ್ತರು ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಬಿಗುಗೊಳಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

    ಒತ್ತುವರಿ ತೆರವು ಕಾರ್ಯಾಚರಣೆ: ನಗರವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ನಗರಸಭೆ ಜಾಗ ಒತ್ತುವರಿ ತೆರವು ಮಾಡಲು ಇಂದಿನಿಂದ ಚಾಲನೆ ನೀಡಲಾಗಿದೆ. ಎಷ್ಟೆ ಪ್ರಭಾವಿಗಳು ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು. ಈಗಾಗಲೆ ಶಾಸಕರು ನಗರಸಭೆ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲು 30 ಲಕ್ಷ ರೂ. ಹಣ ಮೀಸಲಿರಿಸಿದ್ದಾರೆ. ನಗರಸಭೆ ಹಾಗೂ ಸರ್ಕಾರಿ ಜಾಗವನ್ನು ಯಾರಾದರೂ ಒತ್ತುವರಿ ಮಾಡಿದ್ದರೇ ತಕ್ಷಣ ಅದನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ಒತ್ತುವರಿ ತೆರವುಗೊಳಿಸುವ ಜತೆಗೆ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿ, ಒತ್ತುವರಿ ಖರ್ಚನ್ನು ಸಂಬಂಧಪಟ್ಟ ಒತ್ತುವರಿದಾರರಿಂದ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

    ನಗರಸಭೆ ಅಭಿಯಂತರಾದ ರಾಜೇಶ್, ವಿಠಲ್ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts