ಕಲಬುರಗಿ: ಮಹಾರಾಷ್ಟ್ರದ ವೀರ್ ಡ್ಯಾಂನಿಂದ ಭೀಮಾ ನದಿಗೆ ೧.೨೦ ಲಕ್ಷಕ್ಕೂ ಹೆಚ್ಚಿನ ಕೂಸೆಕ್ಸ್ ನೀರು ಬಿಡುಗಡೆ ಮಾಡಿದ್ದು, ಭೀಮಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ. ಹರಿಬಿಟ್ಟ ನೀರು ಕಲಬುರಗಿ ಜಿಲ್ಲೆಗೆ ತಲುಪಲು ಸುಮಾರು ೨೫ ರಿಂದ ೩೦ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ನೀರಿನಿಂದ ಸಧ್ಯಕ್ಕೆ ಭೀಮಾ ನದಿಯ ಅಕ್ಕಪಕ್ಕ ಗ್ರಾಮಗಳಿಗೆ ಯಾವುದೇ ರೀತಿಯ ಪ್ರವಾಹ ಉಂಟಾಗುವುದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾ ನದಿ ತೀರಕ್ಕೆ ಹಾಗೂ ಸನ್ನತ್ತಿ ಬ್ರಿಡ್ಜ್-ಕಂ-ಬ್ಯಾರೇಜ್ ಕಡೆಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಸಹ ಬಿಡದಂತೆ ಎಚ್ಚರಿಕೆ ವಹಿಸಲು ಅವರು ಕೋರಿದ್ದಾರೆ. ಮುಂದುವರೆದು, ಈ ನೀರಿನಿಂದ ಏನಾದರೂ ಸಮಸ್ಯೆ ಕಂಡುಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ ೧೦೭೭ ಹಾಗೂ ದೂರವಾಣಿ ಸಂಖ್ಯೆ ೦೮೪೭೨-೨೭೮೬೦೫ಗೆ ಸಂಪರ್ಕಿಸಬಹುದಾಗಿದೆ.