More

    ಭಾರತದ ಅಲ್ಪಸಂಖ್ಯಾತರಿಗೆ ತೊಂದರೆ ಇಲ್ಲ

    ಧಾರವಾಡ: ಸಿಎಎ, ಎನ್​ಆರ್​ಸಿ ಬಗ್ಗೆ ಜನರಿಗೆ ಸುಳ್ಳು ಹೇಳಿ ತಪ್ಪು ಕಲ್ಪನೆ ಮೂಡಿಸುವ ತಂತ್ರ ನಡೆಯುತ್ತಿದೆ. ಇದು ಪೌರತ್ವವನ್ನು ನೀಡುವ ಕಾಯ್ದೆ ಹೊರತು ಕಿತ್ತುಕೊಳ್ಳುವುದಲ್ಲ. ಭಾರತದ ಅಲ್ಪಸಂಖ್ಯಾತರಿಗೆ ಇದರಿಂದ ತೊಂದರೆಯಾಗುವುದಿಲ್ಲ ಎಂದು ಆರ್​ಎಸ್​ಎಸ್ ಉತ್ತರ ಕರ್ನಾಟಕ ಸಹಪ್ರಾಂತ ಕಾರ್ಯವಾಹ ಶ್ರೀಧರ ನಾಡಗೀರ ಹೇಳಿದರು.

    ಇಲ್ಲಿನ ಕಡಪಾ ಮೈದಾನದಲ್ಲಿ ಶನಿವಾರ ಸಂಜೆ ನಗರದ ದೇಶಭಕ್ತ ನಾಗರಿಕರ ವೇದಿಕೆ ಆಯೋಜಿಸಿದ್ದ ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಬೆಂಬಲಿಸಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

    ಹಿಂದು ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಕಾಯ್ದೆ ಕಾನೂನಿಗೆ ವಿರುದ್ಧವಾಗಿದೆ ಎಂದು ಪೊಳ್ಳು ಪ್ರತಿಭಟನೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ 70ಕ್ಕೂ ಹೆಚ್ಚು ತಿದ್ದುಪಡಿಗಳ ಮೂಲಕ ಸಂವಿಧಾನಕ್ಕೆ ಮೋಸ ಮಾಡಿದೆ. ಈ ಹಿಂದೆ ಪ್ರಶಸ್ತಿ ವಾಪಸ್ ಮಾಡಿದವರು ದುಡ್ಡಿನ ದಾಸರು. ಅವರು ಪ್ರಶಸ್ತಿ ವಾಪಸ್ ಮಾಡಿದ್ದಾರೆ ಹೊರತು ನಗದು ವಾಪಸ್ ಮಾಡಿಲ್ಲ. ನಕಲಿ ಬುದ್ಧಿಜೀವಿಗಳಿಗೆ ಕಳ್ಳ ಮಾರ್ಗದಲ್ಲಿ ಬರುತ್ತಿದ್ದ ವಿದೇಶಿ ಹಣ ಈಗ ನಿಂತಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ವಕ್ಪ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಮಾನಪಾಡಿ ಮಾತನಾಡಿ, ಸಿಎಎ ಜಾರಿಗೆ ಯಾರೂ ಧೈರ್ಯ ತೋರಿರಲಿಲ್ಲ. ಅದಕ್ಕೆ ಬಿಜೆಪಿ, ಮೋದಿ, ಷಾ ಬರಬೇಕಾಯಿತು. ನುಸುಳುಕೋರರನ್ನು ತಡೆಯಲು ಕಾಯ್ದೆ ಬೇಕು. ಅದನ್ನು ವಿರೋಧಿಸುವ ನೆಪದಲ್ಲಿ ಮುಗ್ಧ ಮುಸ್ಲಿಮರ ದಾರಿ ತಪ್ಪಿಸಿ ಗಲಾಟೆ ಮಾಡಿಸಲಾಗುತ್ತಿದೆ. ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರಿಗೆ ತೊಂದರೆ ಇಲ್ಲ. ಆದ್ದರಿಂದ, ವಿರೋಧದ ಹೆಸರಲ್ಲಿ ನಡೆಯುತ್ತಿರುವ ಕೆಲವರ ಕುತಂತ್ರ ಅರಿತುಕೊಳ್ಳಬೇಕು ಎಂದರು.

    ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಕಾರ್ಯದರ್ಶಿ ಗೋವರ್ಧನರಾವ್, ವಿಶ್ವ ಹಿಂದು ಪರಿಷತ್ ಪ್ರಮುಖ ಮಹಾಬಳೇಶ್ವರ, ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ವಿನಾಯಕ ಜೋಶಿ, ಆರ್.ಡಿ. ಕುಲಕರ್ಣಿ, ಶಿವಾಜಿ ಡೇಂಬ್ರೆ, ಇತರರು ವೇದಿಕೆಯಲ್ಲಿದ್ದರು. ಶ್ರೀರಾಮ ಸೇನಾ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜರಂಗ ದಳ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ನಿರ್ವಹಿಸಿದರು.

    ದುಷ್ಟಶಕ್ತಿಗಳ ಕುತಂತ್ರ ಅರಿಯಿರಿ: ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಅಧಿಕಾರ ಅನುಭವಿಸಿ ದೇಶವನ್ನು ಭ್ರಷ್ಟ, ಬರಬಾದ್ ಮಾಡಿದ ಕಾಂಗ್ರೆಸ್​ನವರ ಸ್ಥಿತಿ ನೀರಿನಿಂದ ಹೊರಹಾಕಿದ ಮೀನಿನಂತಾಗಿದೆ. ಮುಸ್ಲಿಮರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮೌನಿ ಮನಮೋಹನ ಸಿಂಗ್ ಹಾಗೂ ಛೀ ಥೂ ಎನ್ನುವ ಮಮತಾ ಬ್ಯಾನರ್ಜಿ ಈ ಹಿಂದೆ ಪೌರತ್ವ ಕೊಡಿ ಎಂದಿದ್ದರು. ಇಂದೇಕೆ ವಿರೋಧಿಸುತ್ತಿದ್ದಾರೆ? ಅವರಿಗೆ ದೇಶ, ಧರ್ಮ, ಸುರಕ್ಷತೆ, ಶಾಂತಿ ಬೇಡ. ಬೇಕಾಗಿರುವುದು ಕುರ್ಚಿ. ನಾಚಿಕೆ ಇಲ್ಲದ ಕಾಂಗ್ರೆಸ್ಸಿಗರು 50 ವರ್ಷ ದಲಿತರಿಗಾಗಿ ಏನೂ ಮಾಡಿಲ್ಲ. ಡಾ. ಅಂಬೇಡ್ಕರರಿಗೆ ಕಾಂಗ್ರೆಸ್​ನವರು ಎಷ್ಟು ತೊಂದರೆ ಕೊಟ್ಟಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತೀಯ ಮುಸ್ಲಿಮರು ಭಾರತ ಮಾತೆಯ ವೀರ ಸುಪುತ್ರರು. ಪಾಕಿಸ್ತಾನ, ಚೀನಾದ ದುಷ್ಟ ಶಕ್ತಿಗಳು ಕಾಯ್ದೆ ವಿರೋಧಿ ಹೋರಾಟಕ್ಕೆ ಸಾಥ್ ನೀಡಿವೆ ಎಂದು ಕುಟುಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts