More

    ಭರವಸೆ ಈಡೇರದಿದ್ದರೆ ಅ.15ರಿಂದ ಮತ್ತೆ ಹೋರಾಟ

    ಲಕ್ಷ್ಮೇಶ್ವರ: ಸರ್ಕಾರ ಕೊಟ್ಟ ಭರವಸೆಯಂತೆ ಸೆ. 15ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸದಿದ್ದರೆ ಅಕ್ಟೋಬರ್ 15ರಿಂದ ಲಕ್ಷಾಂತರ ಸಮಾಜ ಬಾಂಧವರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದು ಶತಸಿದ್ಧ. ಇದಲ್ಲದೆ, ವಿಶ್ವ ಮಟ್ಟದಲ್ಲೂ ಪಂಚಮಸಾಲಿ ಸಮಾಜದ ಬೃಹತ್ ಹೋರಾಟ ರೂಪಿಸುವ ಮೂಲಕ ಪ್ರಧಾನಮಂತ್ರಿಗೂ ಹಕ್ಕೊತ್ತಾಯ ಮಾಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

    ಪಟ್ಟಣದಲ್ಲಿ ಮಂಗಳವಾರ ಕೈಗೊಂಡ ಶರಣಾರ್ಥಿ ಸಂದೇಶ (ಅಭಿನಂದನೆ) ಜಾಥಾದಲ್ಲಿ ಪಾಲ್ಗೊಂಡ ಬಳಿಕ ಅವರು ಶ್ರೀ ರಂಭಾಪುರಿ ಜ. ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ಬಡತನದಲ್ಲೇ ಕಾಲ ಕಳೆಯುತ್ತಿರುವ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ 2ಎ ಮೀಸಲಾತಿ ಇಂದಿನ ಅಗತ್ಯವಾಗಿದೆ. ನ್ಯಾಯಸಮ್ಮತವಾದ ಮೀಸಲಾತಿ ಪಡೆಯಲು ಕೈಗೊಂಡ ಹೋರಾಟಕ್ಕೆ ಸಮಾಜ ನೀಡಿರುವ ಬೆಂಬಲಕ್ಕೆ ಶರಣು-ಶರಣಾರ್ಥಿ. ಹೋರಾಟದ ಸ್ವರೂಪ ಅರಿತ ಸಿಎಂ ಬಿಎಸ್​ವೈ 6 ತಿಂಗಳು ಕಾಲಾವಕಾಶ ಕೇಳಿದ್ದಾರೆ. ಸಚಿವರು, ಸಮಾಜದ ರಾಜಕೀಯ ನಾಯಕರು, ಸಮಾಜದ ಹಿರಿಯರ ಒಮ್ಮತದ ನಿರ್ಣಯ, ಮುಖ್ಯಮಂತ್ರಿ ಮೇಲಿನ ನಂಬಿಕೆ, ಗೌರವ, ವಿಶ್ವಾಸದಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಹೋರಾಟಕ್ಕೆ ಸಮಾಜದ ಫೈರ್​ಬ್ರ್ಯಾಂಡ್​ಗಳಾದ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ ಅಂಥವರ ಪ್ರಯತ್ನದಿಂದ ಸರ್ಕಾರ ಇಂಥ ಭರವಸೆ ನೀಡಿದೆ ಎಂದರು.

    712 ಕಿಮೀ ಪಂಚಲಕ್ಷ ಹೆಜ್ಜೆ ಪಾದಯಾತ್ರೆ, 39 ದಿನಗಳ ಧರಣಿ, 23 ದಿನಗಳ ಶರಣಾರ್ಥಿ ಜಾಥಾಕ್ಕೆ ಲಕ್ಷ್ಮೇಶ್ವರ ತಾಲೂಕಿನ ಸಮಾಜದವರ ತನು-ಮನ-ಧನ ಸಹಾಯ, ಸಹಕಾರ, ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವೆ. ಶಿಷ್ಯರಿದ್ದಲ್ಲಿಗೆ ಗುರುಗಳು ಬಂದು ಕೈಲಾದ ಮಟ್ಟಿಗಿನ ಶಿಷ್ಯ ಋಣ ಭಾರ ಇಳಿಸಿಕೊಳ್ಳುವಂತಹ ಶರಣಾರ್ಥಿ ಸಂದೇಶ ಜಾಥಾ ಸಂತಸ ತಂದಿದೆ ಎಂದರು.

    ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು. ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತ ನಡೆಸಲು ಸಮಾಜದ ಸಹಕಾರ ಮುಖ್ಯ. ಸಮಾಜದ ಶಾಸಕರು ಪಕ್ಷಾತೀತವಾಗಿ, ಸ್ವಾಭಿಮಾನದಿಂದ ಸರ್ಕಾರಕ್ಕೆ ಒತ್ತಾಯಿಸಬೇಕು. ಮೀಸಲಾತಿಗೆ ಕೈಗೊಂಡ ಹೋರಾಟಕ್ಕೆ ಅಂತಿಮ ರೂಪ ಸಿಕ್ಕಿಲ್ಲವಾದ್ದರಿಂದ ಇದು ಆರಂಭ ಎಂಬುದನ್ನು ಸಮಾಜದವರು ಅರಿತು ಜಾಗೃತರಾಗಬೇಕು. ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಶ್ರೇಯಸ್ಸಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.

    ಸರ್ಕಾರ ಸಮಾಜದ ಋಣ ತೀರಿಸಲಿ: ಗಂಗಣ್ಣ ಮಹಾಂತಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕ ಅದರಲ್ಲೂ ಪಂಚಮಸಾಲಿ ಸಮಾಜದ ಬೆಂಬಲದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವಂತಾಗಿದೆ. ಸರ್ಕಾರ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು ಎಂದರು. ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಚನ್ನಪ್ಪ ಜಗಲಿ, ವಿಜಯ ಮೆಕ್ಕಿ, ಡಿ.ವೈ. ಹುನಗುಂದ, ಎಂ.ಆರ್. ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ಬಸವೇಶ ಮಹಾಂತಶೆಟ್ಟರ್, ಶಿವನಗೌಡ ಅಡರಕಟ್ಟಿ, ದ್ಯಾಮಣ್ಣ ಕಮತದ, ಸುಲೋಚನಾ ಜವಾಯಿ, ಮಂಜುನಾಥ ಮಾಗಡಿ, ರಮೇಶ ಹಾಳದೋಟದ, ಬಸವರಾಜ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಉಳವೇಶ ಪಾಟೀಲ, ಮಂಜು ನರೇಗಲ್ಲ, ಅರುಣ ಮೆಕ್ಕಿ, ಈರಣ್ಣ ಮುಳಗುಂದ, ರಮೇಶ ದನದಮನಿ, ಆನಂದ ಮಹಾಂತಶೆಟ್ಟರ, ಸಂತೋಷ ಜಾವೂರ, ಈರಣ್ಣ ಕಟಗಿ, ಮಂಜುನಾಥ ಗೌರಿ ಇತರರಿದ್ದರು. ಎಸ್.ಎಫ್. ಆದಿ, ಎಂ.ಎಸ್. ಚಾಕಲಬ್ಬಿ, ಎಲ್.ಎಸ್. ಅರಳಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts