ಶ್ರೀಧರ ಅಣಲಗಾರ ಯಲ್ಲಾಪುರ
ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಕಾರ್ಯಾರಂಭ ಮಾಡದೇ ಇರುವುದರಿಂದ ವಿದ್ಯಾಗಮ ಯೋಜನೆ ಜಾರಿಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು, ಹೋಂ ವರ್ಕ್ಗಳನ್ನು ನೀಡುತ್ತ ಕಲಿಕೆಯ ಮನಸ್ಥಿತಿಯಿಂದ ಮಕ್ಕಳು ದೂರವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗೆ ನೀಡಿದ ಚಟುವಟಿಕೆಯೊಂದರಲ್ಲಿ ಬೀರಗದ್ದೆಯ ವಿದ್ಯಾರ್ಥಿಯೊಬ್ಬ ಭತ್ತದ ಸಸಿ ಬೆಳೆದು ಮಾದರಿಯಾಗಿದ್ದಾನೆ.
ಬೀರಗದ್ದೆಯ ನಂ. 2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಸಂಜಯ.ವಿ.ಜಿ ಎಂಬಾತ ಭತ್ತದ ಸಸಿ ನಾಟಿ ಮಾಡಿ ಪೋಷಿಸುತ್ತಿದ್ದಾನೆ. ವಿದ್ಯಾಗಮದಡಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಬೀಜಗಳನ್ನು ಹಾಕಿ, ಗಿಡ ಬೆಳೆಸುವ ಚಟುವಟಿಕೆಯೊಂದನ್ನು ಶಿಕ್ಷಕರು ನೀಡಿದ್ದರು. ಸಂಜಯ, ಸೋನಾಮಸೂರಿ ಭತ್ತದ ಸಸಿ ನಾಟಿ ಮಾಡಿ ಬೆಳೆಸುತ್ತಿದ್ದಾನೆ. ತನ್ನ ಮನೆಯ ಪಕ್ಕದಲ್ಲಿರುವ ಬೇಣದಲ್ಲಿ ಚಿಕ್ಕ ಭಾಗವನ್ನು ಆಯ್ದುಕೊಂಡು, ಅಲ್ಲಿ ಸೋನಾ ಮಸೂರಿ ಭತ್ತವನ್ನು ಬಿತ್ತಿ, ನಾಟಿ ಮಾಡಿ ಗಿಡ ಬೆಳೆಸುತ್ತಿದ್ದಾನೆ. ಚಟುವಟಿಕೆ ನೀಡಿ ಹೋಗಿದ್ದ ಶಿಕ್ಷಕ ರಘುನಾಥ ತಳೇಕರ್ ಅವರು, ಕೆಲ ದಿನಗಳ ನಂತರ ಪರಿಶೀಲನೆಗೆಂದು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಯ ಕಾರ್ಯ ನೋಡಿ ಆಶ್ಚರ್ಯಗೊಂಡಿದ್ದಾರೆ. ಅಲ್ಲದೆ, ವಿದ್ಯಾರ್ಥಿಯ ಕ್ರಿಯಾಶೀಲತೆ ಹಾಗೂ ಕೃಷಿ ಆಸಕ್ತಿಯ ಬಗೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಯಾವ ಪ್ರೇರಣೆ, ಯಾರ ಸಹಾಯವಿಲ್ಲದೆ ಸ್ವ ಆಸಕ್ತಿಯಿಂದ ವಿದ್ಯಾರ್ಥಿ ಭತ್ತದ ಸಸಿ ಬೆಳೆದಿರುವುದು ಆಶ್ಚರ್ಯದ ಜತೆಗೆ ಅಭಿಮಾನವನ್ನೂ ಮೂಡಿಸಿದೆ. ಕರೊನಾ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆಯಾಗಿ ಜಾರಿಗೆ ತಂದ ವಿದ್ಯಾಗಮದಂತಹ ಯೋಜನೆ ಈ ರೀತಿಯ ಕ್ರಿಯಾಶೀಲತೆಗೆ ಕಾರಣವಾಗಿರುವುದು ವಿಶೇಷವಾಗಿದೆ. | ರಘುನಾಥ ತಳೆಕರ್ ಶಿಕ್ಷಕರು