ಪುತ್ತೂರು ಗ್ರಾಮಾಂತರ: ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದ ಅಂತರ್ಜಾತಿ ಜೋಡಿಯೊಂದಕ್ಕೆ ಬುಧವಾರ ಅಂಬೇಡ್ಕರ್ ಆಪತ್ಭಾಂಧವ ಸಂಘಟನೆ ಸರಳ ವಿವಾಹದ ಮೂಲಕ ಕಂಕಣ ಭಾಗ್ಯ ಕರುಣಿಸಿದೆ. ಅಂಬೇಡ್ಕರ್ ಆಪತ್ಬಾಂಧವ ಸಂಘಟನೆಯಿಂದ ನಡೆದ ಇಪ್ಪತ್ತನೇ ಸರಳ ವಿವಾಹ ಇದಾಗಿದೆ.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇರ್ಲದ ಆನಂದ ಕೌಡಿಚ್ಚಾರು ಅವರ ಪುತ್ರಿ ಆಶಾ ಕೌಡಿಚ್ಚಾರು ಮತ್ತು ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೇವಳ ನಿವಾಸಿ ದಿ.ಗಣೇಶ್ ಮಡಿವಾಳ ಅವರ ಪುತ್ರ ಶಶಾಂಕ್ ಅವರು 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿಯ ವಿವಾಹಕ್ಕೆ ಯುವಕನ ಕಡೆಯವರ ಆಕ್ಷೇಪವಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಆಪತ್ಭಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ಬುಧವಾರ ಪುತ್ತೂರಿನಲ್ಲಿ ಸರಳ ರೀತಿಯಲ್ಲಿ ವಿವಾಹ ನೆರವೇರಿಸಿ ಕಂಕಣ ಭಾಗ್ಯ ಕರುಣಿಸಿದ್ದಾರೆ.
ವಿವಾಹ ಕಾರ್ಯಕ್ರಮಕ್ಕೆ ಮೊದಲು ರಾಜು ಹೊಸ್ಮಠ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಶುಭಹಾರೈಸಿದರು. ದಲಿತ ಮುಖಂಡರಾದ ಅಣ್ಣಿ ಏಳ್ತಿಮಾರ್ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ನೂತನ ವಧು-ವರರು ಅಂಬೇಡ್ಕರ್ ಅವರಿಗೆ ಗೌರವ ಅರ್ಪಿಸಿದರು. ಬಳಿಕ ವಧು-ವರರು ಹಾರ ಬದಲಾಯಿಸಿಕೊಳ್ಳುವ ಮೂಲಕ ವಿವಾಹ ನೆರವೇರಿಸಲಾಯಿತು. ಯುವತಿಯ ತಂದೆ ಆನಂದ ಕೌಡಿಚ್ಚಾರು ಮಾತ್ರ ವಿವಾಹ ಸಮಾರಂಭದಲ್ಲಿ ಭಾಗಹಿಸಿದ್ದರು.
ದಲಿತ ಸಂಘಟನೆಯ ಪ್ರಮುಖರಾದ ಸಂಕಪ್ಪ ನಿಡ್ಪಳ್ಳಿ, ಪ್ರವೀಣ್ ಕುಮಾರ್ ಹೇಮಾಜೆ, ಲೋಕೇಶ್ ಹಿರೇಬಂಡಾಡಿ, ಪದ್ಮನಾಭ ಬಪ್ಪಳಿಗೆ, ಚಿದಾನಂದ ಕೆಯ್ಯೂರು, ವಿಠಲ ನಾಯಕ್, ಆಪತ್ಬಾಂಧವ ರಕ್ತದಾನಿ ಗ್ರೂಪ್ ಅಡ್ಮಿನ್ ಶಶಿಧರ್ ಕೆಯ್ಯೂರು, ಸುರೇಶ್ ಬುಳೇರಿಕಟ್ಟೆ, ಸುಮತಿ ಭಕ್ತಕೋಡಿ, ಧರಣಿ ಕೆಯ್ಯೂರು ಮತ್ತಿತರರು ಇದ್ದರು.