ಹುಣಸೂರು: ಧನುರ್ಮಾಸದ ಅಂಗವಾಗಿ ಒಂದು ತಿಂಗಳಿಂದ ನಗರದಲ್ಲಿ ವಿವಿಧ ತಂಡಗಳು ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮವನ್ನು ಮಕರ ಸಂಕ್ರಾಂತಿಯ ದಿನ ಸಂಪನ್ನಗೊಳಿಸಿದವು.
ನಗರದ ಗಣೇಶನ ಗುಡಿ ಬೀದಿಯ ರಾಮಮಂದಿರ, ದಾವಣಿ ಬೀದಿ, ವಿ.ಪಿ.ಬೋರೆಯ ರಾಮಮಂದಿರದ ತಂಡಗಳು ತಿಂಗಳ ಕಾಲ ಮುಂಜಾನೆ 4 ಗಂಟೆಯಿಂದಲೇ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಭಾನುವಾರ ಎಲ್ಲ ತಂಡಗಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಕೇಸರಿ ರುಮಾಲು ಧರಿಸಿ ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮಚಂದ್ರನ ಉತ್ಸವ ಮೂರ್ತಿಯನ್ನು ಹೊತ್ತು ಭಜನೆ ನಡೆಸುತ್ತ ಮೆರವಣಿಗೆ ಸಾಗಿದವು.
ಕೇಸರಿಮಯವಾದ ಜೆಎಲ್ಬಿ ರಸ್ತೆ: ನಗರದ ಹೃದಯ ಭಾಗವಾದ ಜೆಎಲ್ಬಿ ರಸ್ತೆಯಲ್ಲಿ ಗಣೇಶನಗುಡಿ ಬೀದಿ ಮತ್ತು ದಾವಣಿ ಬೀದಿಯ ರಾಮಮಂದಿರದ ಭಜನಾತಂಡದ 500ಕ್ಕೂ ಹೆಚ್ಚು ಸದಸ್ಯರು ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ತಲೆಗೆ ಕೇಸರಿ ರುಮಾಲು ತೊಟ್ಟ ನಾಗರಿಕರು ಭಜನಾ ತಂಡದೊಂದಿಗೆ ಹಾಡಿಗೆ ಹೆಜ್ಜೆ ಹಾಕಿದರು. ಇಡೀ ಜೆಎಲ್ಬಿ ರಸ್ತೆ ಕೇಸರಿಮಯವಾಗಿತ್ತು. ನಂತರ ಎಲ್ಲ ಉತ್ಸವ ಮೂರ್ತಿಗಳನ್ನು ಸ್ವಸ್ಥಾನಕ್ಕೆ ತಲುಪಿಸಲಾಯಿತು.