ಹೊನ್ನಾವರ: ತಾಲೂಕಿನ ಕಾಸರಕೋಡದ ಬಂದರಿನಲ್ಲಿದ್ದ ಬೋಟ್ನಿಂದ ಕಳ್ಳತನವಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಾರಿಕೆ ಬಲೆ ಮತ್ತು ಇನ್ನಿತರ ವಸ್ತುಗಳನ್ನು ಹೊನ್ನಾವರ ಪೋಲಿಸರು ವಾಹನ ಸಮೇತ ಬುಧವಾರ ವಶಪಡಿಸಿಕೊಂಡಿದ್ದಾರೆ.
ಕಾಸರಕೋಡಿನಲ್ಲಿ ನಿಲ್ಲಿಸಿಟ್ಟ ಬೋಟ್ನ್ನು ಒಡೆದು 40 ಲಕ್ಷ ರೂ. ಬೆಲೆ ಬಾಳುವ ಮೀನುಗಾರಿಕೆ ಬಲೆ, 3 ಲಕ್ಷ ರೂ. ಮೌಲ್ಯದ ಹಿತ್ತಾಳೆ ರಿಂಗ್ಗಳು ಸೇರಿದಂತೆ 43 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದ ಬಗ್ಗೆ ಬೋಟ್ ಮಾಲೀಕ ಭಟ್ಕಳದ ಅಬ್ದುಲ್ ರಜಾಕ್ ಅಬ್ದುಲ್ ರೆಹಮಾನ್ ಶೇಖ್ ಅವರು 11-02-2020 ರಂದು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು. ಅರವಿಂದ ಆಚಾರಿ, ವೆಂಕಟ್ರಮಣ ಮೊಗೇರ, ದಾಸ ಮೊಗೇರ, ಪ್ರಕಾಶ ಆಚಾರಿ ಮತ್ತು ಅವರ ಇನ್ನೂ 15-20 ಜನರ ವಿರುದ್ಧ ದೂರು ದಾಖಲಾಗಿತ್ತು.
ಹೊನ್ನಾವರ ಸಿಪಿಐ ವಸಂತ ಆಚಾರಿ, ಪಿಎಸೈ ಶಶಿಕುಮಾರ, ಕ್ರೈಂ ಪಿಎಸೈ ಸಾಮಿತ್ರಿ ನಾಯಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳ್ಳತನಕ್ಕೆ ಬಳಸಿದ ಲಾರಿಯನ್ನು ಮೊದಲು ಪತ್ತೆ ಹಚ್ಚಿದರು. ಭಟ್ಕಳ ತಾಲೂಕಿನ ಸಾಗರ ರಸ್ತೆಯಲ್ಲಿರುವ ಕಳಸನಗದ್ದೆಯಲ್ಲಿ ಕಳ್ಳತನಮಾಡಿದ ಬಲೆ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ.