ಬೆಳಗಾವಿ: ಮಹಾನಗರದಲ್ಲಿ ಸಂಚಾರ ದಟ್ಟಣೆಗೆ, ಪಾರ್ಕಿಂಗ್ ಸಮಸ್ಯೆಗೆ ಮೂಲ ಕಾರಣವಾಗಿರುವ ಬೇಸ್ಮೆಂಟ್ (ನೆಲಮಹಡಿ) ಕಟ್ಟಡಗಳ ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದಿದ್ದು, ನಾಲ್ಕೆದು ವರ್ಷಗಳಿಂದ ಅರ್ಧಕ್ಕೆ ಮೊಟಕುಗೊಂಡಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯಮಾನುಸಾರ ವಾಹನ ನಿಲುಗಡೆಗೆ ಅವಕಾಶ ನೀಡದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಬೇಸ್ಮೆಂಟ್ ವ್ಯಾಪಾರಿ ಮಳಿಗೆ ತೆರವುಗೊಳಿಸಲು ಪಾಲಿಕೆಯು ಹಿಂದೇಟು ಹಾಕುತ್ತಿದೆ. ಪರಿಣಾಮ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯಿಂದ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸುಮಾರು 540ಕ್ಕೂ ಅಧಿಕ ನೆಲಮಹಡಿ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ 2016ರಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮುಂದಿನ ಹೆಜ್ಜೆ ಇಟ್ಟಿತ್ತು. ಅಲ್ಲದೆ, ಕಟ್ಟಡಗಳಿಗೆ ವಿದ್ಯುತ್, ನೀರು ಪೂರೈಕೆ ನಿಲ್ಲಿಸಿ ಟ್ರೇಡ್ ಲೈಸೆನ್ಸ್ ರದ್ದುಪಡಿಸಲು ಕ್ರಮ ವಹಿಸಿತ್ತು. ಬಳಿಕ ರಾಜಕೀಯ ಒತ್ತಡ ಇತರ ಕಾರಣಗಳಿಂದಾಗಿ ಬೇಸ್ಮೆಂಟ್ ಕಾರ್ಯಾಚರಣೆ ಅರ್ಧಕ್ಕೆ ಉಳಿದುಕೊಂಡಿದೆ. ಅಲ್ಲದೆ, ಬೇಸ್ಮೆಂಟ್ ಅಂಗಡಿ ತೆರವುಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಬುಡಾ, ಹೆಸ್ಕಾಂ, ಲೋಕೋಪಯೋಗಿ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಇಲ್ಲಿಯವರೆಗೆ ಸಭೆಗಳು ನಡೆದಿಲ್ಲ.
2015ರಿಂದ 2018ರ ಅವಧಿಯಲ್ಲಿ ಮಹಾನಗರ ಪಾಲಿಕೆಯು ನಿಯಮಾನುಸಾರ ವಾಹನ ನಿಲುಗಡೆಗೆ ಅವಕಾಶ ನೀಡದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಬೇಸ್ಮೆಂಟ್ ವ್ಯಾಪಾರಿ ಮಳಿಗೆಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ನೋಟಿಸ್ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ಅದಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 310 ಕಟ್ಟಡಗಳಿಗೆ ವಿದ್ಯುತ್, ಕುಡಿಯುವ ನೀರು ಸ್ಥಗಿತಗೊಳಿಸಿ ಟ್ರೇಡ್ ಲೈಸೆನ್ಸ್ ರದ್ದುಪಡಿಸಿ ನಂತರ ಎಲ್ಲ ಅಂಗಡಿ ತೆರವುಗೊಳಿಸಲು ಪಾಲಿಕೆ ಕೈಗೊಂಡ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ.
ನಗರದ ಕೆಲವು ಕಡೆ ನಿಯಮ ಉಲ್ಲಂನೆ ಮಾಡಿದ್ದೂ ಅಲ್ಲದೆ ಬೇಸ್ಮೆಂಟ್ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ಗಳ ಸಂಗ್ರಹ ಮಾಡಲಾಗಿದೆ. ಜತೆಗೆ ನೆಲಮಹಡಿಯಲ್ಲಿ ಡಯಾಲಿಸೀಸ್ ಕೇಂದ್ರ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಬಹುಮಹಡಿ ಕಟ್ಟಡಗಳಲ್ಲಿನ ಬೇಸ್ಮೆಂಟ್ ಮಳಿಗೆಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯುವ ಕ್ರಮ ಕೈಗೊಂಡಿದೆ. ಈಗಾಗಲೇ 170 ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಳೆಗಾಲ ಮುಗಿದ ಮೇಲೆ ಕಾರ್ಯಾಚರಣೆ ಆರಂಭಿಸಲಾಗುವುದು.
| ಡಾ.ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ
ನೋ ಪಾರ್ಕಿಂಗ್ ಸಮಸ್ಯೆ: ಮಹಾನಗರ ಪ್ರಮುಖ ರಸ್ತೆ, ಮಾರುಕಟ್ಟೆಗಳಲ್ಲಿ ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಆದರೆ, ರಸ್ತೆ ಪಕ್ಕದಲ್ಲಿ, ಖಾಲಿ ಪ್ರದೇಶಗಳು, ಅಂಗಡಿಗಳ ಮುಂಭಾಗದಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ನೆಲ ಮಹಡಿ ಅಂಗಡಿಗಳನ್ನು ತೆರವುಗೊಳಿಸಿದ ನಂತರ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ಕಟ್ಟಡ ಮಾಲೀಕರಿಂದಲೆ ತಕ್ಷಣ ರ್ಯಾಂಪ್ (ವಾಹನ ಪ್ರವೇಶಕ್ಕೆ ದಾರಿ) ನಿರ್ಮಿಸಲು ಪಾಲಿಕೆ ಕ್ರಮ ವಹಿಸಬೇಕು ಎಂದು ಸ್ಥಳಿಯ ನಿವಾಸಿಗಳಾದ ರವಿ ಎಸ್.ಪಾಟೀಲ, ರಾಹುಲ ಅನಗೋಳಕರ ಆಗ್ರಹಿಸಿದ್ದಾರೆ.
ಅಧಿಕಾರಿಗಳಿಂದ ಅನುಮತಿ: ಮಹಾನಗರ ಪಾಲಿಕೆಯು ಬಹುಮಡಿ ಕಟ್ಟಡಗಳಿಗೆ ವ್ಯಾಪಾರ&ವಹಿವಾಟು ನಡೆಸಲು ಪರವಾನಗಿ ನೀಡುತ್ತಿರುವ ಸಂದರ್ಭದಲ್ಲಿ ನೆಲಮಹಡಿ ಪಾರ್ಕಿಂಗ್ ಎಂದು ಉಲ್ಲೇಖಿಸುತ್ತಾರೆ. ಬಳಿಕ ಪಾಲಿಕೆಯ ಅಧಿಕಾರಿಗಳೇ ಬೇಸ್ಮೆಂಟ್ನಲ್ಲಿ ಅಂಗಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿ ಪರವಾನಗಿ ನೀಡಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳೇ ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿರುವುದರಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.
| ಮಂಜುನಾಥ ಕೋಳಿಗುಡ್ಡ