ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ಗಳನ್ನು ಬಿಡಲಾಯಿತು.
ಪೊಲೀಸರ ಭದ್ರತೆಯಲ್ಲಿ ಬಸ್ಗಳನ್ನು ಓಡಿಸಲಾಯಿತು. ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 2 ಬಸ್ಗಳನ್ನು ಹಾಗೂ ಸಿಟಿ ವ್ಯಾಪ್ತಿಯಲ್ಲಿ 12 ಬಸ್ಗಳನ್ನು ಬಿಡಲಾಯಿತು. ಮುಷ್ಕರ ಹಿಂಪಡೆದ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಬರಲಾರಂಭಿಸಿದರು. ಹಾಗಾಗಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ ಸೇರಿ ಇತರೆಡೆ 125 ಬಸ್ಗಳನ್ನು ಬಿಡಲಾಯಿತು. ಬಿಆರ್ಟಿಎಸ್ ಬಸ್ಗಳೂ ಸಂಚರಿಸಿದವು. ಯಾವುದೇ ಅಹಿತಕರ ಘಟನೆಯಾಗಿಲ್ಲ. ನಾಳೆಯಿಂದ ಎಲ್ಲ ಬಸ್ಗಳು ಸಂಚರಿಸಲಿವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಡಿಸಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.
ಭದ್ರತಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಬಸ್ ನಿಲ್ದಾಣದಲ್ಲಿಯೇ ಇದ್ದರು. ಬರುವ ಪ್ರಯಾಣಿಕರಿಗೆ ಬಸ್ ಯಾವ ಸಮಯಕ್ಕೆ ತೆರಳಲಿವೆ ಎಂದು ಮಾಹಿತಿ ನೀಡುತ್ತಿದ್ದರು. ಬಹಳಷ್ಟು ಪ್ರಯಾಣಿಕರು ಬೆಳಗ್ಗೆಯಿಂದ ಬಸ್ಗಾಗಿ ಕಾಯುತ್ತಿದ್ದರು. ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬಸ್ಗಳನ್ನು ಶೀಘ್ರವೇ ಬಿಡಲಾಗುವುದು ಎಂದು ಪ್ರಯಾಣಿಕರಿಗೆ ತಿಳಿಸಿದರು. ಅಲ್ಲದೆ, ಮಾಸ್ಕ್ಗಳನ್ನು ವಿತರಿಸಿದರು. ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದರು.
ನೌಕರರ ಮನವೊಲಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಇನ್ನೂ ಕೆಲವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ಬಸ್ಗಳನ್ನು ಓಡಿಸಲಾಗುವುದು. ಮೂರು ದಿನಗಳ ಮುಷ್ಕರದಿಂದ ಸಂಸ್ಥೆಗೆ 12 ಕೋಟಿ ರೂ. ನಷ್ಟವಾಗಿದೆ. -ಕೃಷ್ಣ ಬಾಜಪೈ, ವಾಕರಸಾ ಸಂಸ್ಥೆ ಎಂ.ಡಿ.
ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವರು. ಪ್ರಯಾಣಿಕರು ಆತಂಕವಿಲ್ಲದೇ ಪ್ರಯಾಣ ಮಾಡಬಹುದು. ಪರಿಪೂರ್ಣ ಬಸ್ ಸಂಚಾರ ಆಗಲಿದೆ. ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. -ನಿತೇಶ ಪಾಟೀಲ, ಜಿಲ್ಲಾಧಿಕಾರಿ