ಹಾವೇರಿ: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ವಯೋಮಿತಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಆಕಾಂಕ್ಷಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಕಾರಿಗೆ ಅಡ್ಡ ಕುಳಿತು ಪ್ರತಿಭಟಿಸಿದ ಪ್ರಸಂಗ ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಶನಿವಾರ ನಡೆಯಿತು.
ಜಿಲ್ಲಾ ಕೋರ್ ಕಮಿಟಿ ಸಭೆ ಮುಗಿಸಿ ಹುಬ್ಬಳ್ಳಿಯತ್ತ ಹೊರಟಿದ್ದ ವೇಳೆ ಕಾರಿಗೆ ಅಡ್ಡ ಕುಳಿತು ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಬಿಜೆಪಿ ಶಾಸಕರು ಬಂದು ಸಮಾಧಾನಪಡಿಸಿದರೂ ಪೊಲೀಸ್ ಕಾನಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ಜಗ್ಗಲಿಲ್ಲ. ಅರುಣ ಸಿಂಗ್ ಅವರು ಕಾರಿನಿಂದ ಇಳಿದು ಬಂದು ಆಕಾಂಕ್ಷಿಗಳ ಸಮಸ್ಯೆ ಆಲಿಸಿದರು.
ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ರಾಜಸ್ತಾನ ರಾಜ್ಯಗಳಲ್ಲಿ ಇರುವಂತೆ ಪೊಲೀಸ್ ಕಾನಸ್ಟೇಬಲ್ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಕರ್ನಾಟಕದಲ್ಲಿ ಗರಿಷ್ಠ 38 ವರ್ಷಗಳವರೆಗೆ ಹೆಚ್ಚಿಸುವಂತೆ ಆಗ್ರಹಿಸಿ, ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅವರು, ಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.