ಯಾದಗಿರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತಾಪಿ ವರ್ಗದ ಬದುಕು ದುಸ್ತರಗೊಂಡಿದ್ದು, ಸರಕಾರ ಕೂಡಲೇ ಬರ ಪರಿಹಾರದ ಹಣ ಬಿಡುಗಡೆಗೊಳಿಸಲು ಆಗ್ರಹಿಸಿ ರಾಜ್ಯ ರೈತ ಸಂಘ (ಹಸಿರು ಸೇನೆ)ದಿಂದ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಭೀಕರ ಬರಗಾಲದ ಪರಸ್ಥಿತಿ ಎದುರಾಗಿದೆ. ಮಳೆಯಾಗದ ಕಾರಣ ಕರೆ ಕಟ್ಟೆಗಳು ಸಂಪೂರ್ಣ ಒಣಗಿ ನಿಂತಿವೆ. ಜಲಾಶಯದಲ್ಲಿ ನೀರಿನ ಅಭಾವ ಎದುರಾದ ಕಾರಣ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಈ ಬಾರಿ ಕಾಲುವೆಯಿಂದ ನೀರು ಹರಿಸುವ ಅವಧಿ ಕೂಡಾ ಕಡಿಮೆ ಮಾಡಲಾಗಿದೆ. ಇಷ್ಟೆಯಲ್ಲ ತಾಪತ್ರಯಗಳ ಮಧ್ಯೆಯೂ ರೈತರು ತೊಗರಿ, ಹತ್ತಿ, ಮೆಣಸಿನಕಾಯಿ ಮುಂದಾದ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಸರಕಾರ ಯಾದಗಿರಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ. ಆದರೆ, ಇದುವರೆಗೂ ಬರ ಪರಿಹಾರದ ಕಾಮಗಾರಿ ಆರಂಭಗೊಂಡಿಲ್ಲ. ಪರಿಹಾರದ ಹಣ ಸಹ ವಿತರಣೆಯಾಗಿಲ್ಲ. ಕೇಂದ್ರದಿಂದ ಬಂದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿಲ್ಲ. ಇದರಿಂದ ರೈತರು ಹೊಟ್ಟೆಪಾಡಿಗಾಗಿ ಮತ್ತೆ ಗುಳೆ ಹೋಗಲು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.
ಮಳೆ ಕಮೆಯಾಗಿ ಬರಗಾಲ ಘೋಷಣೆಯಾದರೂ ಈವರೆಗೂ ಬರಪರಿಹಾರ ವಿತರಣೆಯಾಗಿಲ್ಲ. ಸಕರ್ಾರ ಕೂಡಲೇ ರೈತರ ಪ್ರತಿ ಎಕರೆಗೆ 50 ಸಾವಿರ ರೂ.ಪರಿಹಾರ ಬಿಡುಗಡೆ ಮಾಡಬೇಕು. ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಶಾಸನಬದ್ಧವಾಗಿ ವಾಪಸ್ ಪಡೆಯಬೇಕು. ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕು. ಅನ್ನದಾತರ ಪಂಪ್ಸೆಟ್ಗಳಿಗೆ 12 ಗಂಟೆಗಳ ಸತತ ವಿದ್ಯುತ್ ನೀಡಬೇಕು.ಪ್ರತಿ ಟನ್ ಕಬ್ಬಿಗೆ 5.500 ರೂ.ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.