ಬಾಗಲಕೋಟೆ: ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವ ಮೂಲಕ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾಮಟ್ಟದ ಹಾಗೂ ಬರ ನಿರ್ವಹಣೆಗೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬರಗಾಲದ ಸನ್ನಿವೇಶ ಸೂಕ್ಷö್ಮತೆಯಿಂದ ಕೂಡಿದ್ದು, ಜನ, ಜಾನುವಾರುಗಳಿಗೆ ಪ್ರಥಮ ಆಧ್ಯತೆ ಮೇರೆಗೆ ಕೂಡಿಯುವ ನೀರಿನ ವ್ಯವಸ್ಥೆ ಮಾಡತಕ್ಕದ್ದು ಎಂದರು.
ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಹಶೀಲ್ದಾರರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ತಯಾರಿಸಿ, ಆದ್ಯತೆಗೆ ಅನುಗುಣವಾಗಿ ನೀರು ಒದಗಿಸುವ ಕುರಿತಂತೆ ತಾಲೂಕಾ ಮಟ್ಟದಲ್ಲಿ ಟಾಸ್ಕಪೋರ್ಸ ಸಭೆ ನಡೆಸಿ ಕ್ರೀಯಾ ಯೋಜನೆ ರೂಪಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ಡಿಸೆಂಬರ್ ಮಾಹೆಯಲ್ಲಿ 173 ಹಾಗೂ ಜನೇವರಿಯಲ್ಲಿ 179 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆnದು ಅಂದಾಜಿಸಲಾಗಿದ್ದು, ಈ ಗ್ರಾಮಗಳಲ್ಲಿ ಇದ್ದಂತಹ ಬೋರ್ವೆಲ್ಗಳು ಮತ್ತು ಅವುಗಳ ದುರಸ್ಥಿ, ಅಗತ್ಯವಿದ್ದಲ್ಲಿ ಹೊಸ ಬೋರವೆಲ್ ಕೊರೆಯಿಸುವುದು, ಖಾಸಗಿ ಬೋರ್ವೆಲ್ ಹಾಗೂ ಪ್ರತಿ ವರ್ಷ ನೀರು ಕೊಡುವವರ ವಿವರವನ್ನು ತಹಶೀಲ್ದಾರರು, ತಾ.ಪಮ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಆಯಾ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಸಭೆ ನಡೆಸಿ, ಸಭಾ ನಡಾವಳಿಗೊಂದಿಗೆ ಮಾಹಿತಿ ನೀಡಲು ತಿಳಿಸಿದರು.
ಗ್ರಾಮವಾರು ಮೇವಿನ ಲಬ್ಯತೆ ಬಗ್ಗೆ ಕಲೆ ಹಾಕಿ ಮುಂದಿನ ನಾಲ್ಕು-ಐದು ದಿನಗಳಲ್ಲಿ ಮೇವಿನ ಬ್ಯಾಂಕ್ ತೆರೆಯುವ ವ್ಯವಸ್ಥೆಯಾಗಬೇಕು. ಇದೇ ನವೆಂಬರ 23 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದ್ದು, ಎಲ್ಲಾ ಅಧಿಕಾರಿಗಳು ಅಗತ್ಯ ಸಿದ್ದತೆಯಲ್ಲಿರಬೇಕು. ಆಯಾ ತಾಲೂಕಾ ತಹಶೀಲ್ದಾರರು ಸಮಸ್ಯಾತ್ಮಕ ಗ್ರಾಮಗಳ ನಿಖರ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದರು. ಬರ ನಿರ್ವಹಣೆಗೆ ನೇಮಕಗೊಂಡ ನೋಡಲ್ ಅಧಿಕಾರಿಗಳು ತಮ್ಮ ತಾಲೂಕಾ ವ್ಯಾಪ್ತಿಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹನಮರಟ್ಟಿ, ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಕಳ್ಳೇನ್ನವರ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಚವ್ಹಾಣ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಮುಖ್ಯ ಅಭಿಯಂತರ ಪುರಾಣಿಕ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.