ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯ ಪಕ್ಕ ನಿರ್ವಿುಸಿದ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೊದಲೇ ಉದ್ಘಾಟನೆಗೊಳ್ಳಬೇಕಿದ್ದ ಕ್ಯಾಂಟೀನ್ ವಿವಿಧ ಕಾರಣಗಳಿಂದ ವಿಳಂಬವಾಗಿ ಆರಂಭಗೊಂಡಿದೆ. ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಲಭ್ಯವಾಗಲಿದ್ದು, ಸದ್ಯದ ಮಟ್ಟಿಗೆ ಪಾರ್ಸಲ್ ಮಾತ್ರ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕಟ್ಟಡದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ಸಚಿವರು, ಸಾರ್ವಜನಿಕರಿಗೆ ತಿಂಡಿ, ಚಹಾ ವಿತರಿಸಿದರು. ತಹಸೀಲ್ದಾರ್ ಡಿ.ಜಿ. ಹೆಗಡೆ, ಪ.ಪಂ. ಸದಸ್ಯರಾದ ಶ್ಯಾಮಿಲಿ ಪಾಟಣಕರ್, ಪುಷ್ಪಾ ನಾಯ್ಕ, ಮುಖ್ಯಾಧಿಕಾರಿ ಅರುಣ ನಾಯ್ಕ, ಪ್ರಮುಖರಾದ ರಾಮು ನಾಯ್ಕ, ವಿಜಯ ಮಿರಾಶಿ, ಶಿರೀಷ ಪ್ರಭು, ಮುರಳಿ ಹೆಗಡೆ ಇತರರಿದ್ದರು.
ಅಂತೂ ಕೂಡಿ ಬಂದ ಉದ್ಘಾಟನೆ ಭಾಗ್ಯ: ಹೆಬ್ಬಾರ ಅವರು ಮೊದಲ ಬಾರಿ ಶಾಸಕರಾಗಿದ್ದಾಗ ಅವಧಿಯ ಕೊನೆಯಲ್ಲಿ 2017ರ ಡಿಸೆಂಬರ್ನಲ್ಲಿ ಮುಂಡಗೋಡ ಸಮಾವೇಶವೊಂದರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ಗೆ ಭೂಮಿಪೂಜೆ ನೆರವೇರಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಪಟ್ಟಣದ ತರಕಾರಿ ಮಾರುಕಟ್ಟೆ ಆವಾರದಲ್ಲಿ ಶಾಸಕರು ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿದ್ದರು. 2018ರ ಚುನಾವಣೆಯಲ್ಲಿ ಎರಡನೇ ಬಾರಿ ಆಯ್ಕೆಯಾದ ನಂತರ ಇಂದಿರಾ ಕ್ಯಾಂಟೀನ್ ನಿರ್ವಣವನ್ನು ತಾ.ಪಂ. ವಸತಿ ಸಂಕೀರ್ಣದ ಆವಾರಕ್ಕೆ ಸ್ಥಳಾಂತರಿಸಲಾಗಿದ್ದು, ಆಗ ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿದ್ದರು. ಒಂದು ವರ್ಷದ ನಂತರ ಉದ್ಘಾಟನೆಯ ಭಾಗ್ಯ ಕೂಡಿ ಬಂದಿದೆ. ಮುಂಡಗೋಡದ ಹುಬ್ಬಳ್ಳಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನನ್ನೂ ಸಚಿವರು ಸೋಮವಾರ ಉದ್ಘಾಟಿಸಿದರು.