ಮಂಡ್ಯ : ಗ್ರಾಮೀಣ ಭಾಗದ ಬಡಜನರಿಗೆ ಆರೋಗ್ಯ ಸೇವೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದರು.
ಮೇಲುಕೋಟೆ ಹೋಬಳಿ ಬೆಳ್ಳಾಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಭೇಟಿ ಪರಿಶೀಲಿಸಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ನಾಗರಿಕರಿಂದ ಸಮಸ್ಯೆ ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಇಲ್ಲಿನ ಎಸ್.ಬಿ.ಐ. ಹಾಗೂ ಪಶು ವೈದ್ಯಕೀಯ ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ನಾಗರಿಕರಿಂದ ಅಹವಾಲು ಆಲಿಸಿದರು
ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಗ್ರಾಪಂ ವ್ಯಾಪ್ತಿಯ ಜನ ಸಮಸ್ಯೆ ಆಲಿಸಿದರು. ಇದೇ ವೇಳೆ ಮಾಣಿಕ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಶಾಲೆಯಲ್ಲಿರುವ ಸಮಸ್ಯೆ ಬಗ್ಗೆ ಮುಖ್ಯಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಶಾಲೆಯ ಬಲವರ್ಧನೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನ್ಯಾಮನಹಳ್ಳಿ ಶಿವರಾಮೇಗೌಡ, ಗ್ರಾ.ಪಂ. ಸದಸ್ಯೆ ನಂದಿನಿ ಪುಟ್ಟಸ್ವಾಮಿಗೌಡ, ನಿಂಗೇಗೌಡ, ವಿ.ಎಸ್.ಎಸ್.ಎನ್ ಉಪಾಧ್ಯಕ್ಷ ನಟರಾಜು, ಸ್ವಾಮೀಗೌಡ, ಶಾಂತಮ್ಮ ಜಲಬೋರೇಗೌಡ, ಅನಿತಾರಾಣಿ, ಯಜಮಾನ್ ಸಿಂಗ್ರೀಗೌಡ, ಶ್ರೀಕಂಠೇಗೌಡ, ಚಂದ್ರಶೇಖರ್, ಬಾಬು ಕೃಷ್ಣೇಗೌಡ ಸೇರಿದಂತೆ ಇತರರು ಇದ್ದರು.