More

    ಬಗರ್‌ಹುಕುಂ ಸಾಗುವಳಿದಾರರು, ಶರಾವತಿ ಸಂತ್ರಸ್ತರ ಪರ ಹೋರಾಟ; 12ಕ್ಕೆ ಕಾಂಗ್ರೆಸ್ ಪ್ರತಿಭಟನೆ

    ಶಿಕಾರಿಪುರ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನು ಪರಿಹರಿಸಲು ಆಗಿಲ್ಲ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸೆ.12ರಂದು ಶಿಕಾರಿಪುರದಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯದರ್ಶಿ, ಪುರಸಭೆ ಸದಸ್ಯ ನಾಗರಾಜ್ ಗೌಡ ಹೇಳಿದರು.
    ಪಕ್ಷದ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ತಾಲೂಕು ಕಚೇರಿ ಮುಂಭಾಗ ಬೃಹತ್ ಧರಣಿ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಗರ್‌ಹುಕುಂ ಹಾಗೂ ಇನಾಂ ಜಮೀನುಗಳ ಸಾಗುವಳಿದಾರರ ಪರ ಹೇಳಿಕೆ ಕೊಡುವ ಮೂಲಕ ಅನುಕಂಪದ ನಾಟಕ ಆಡುತ್ತಿದ್ದಾರೆ ಎಂದರು.
    ನಾಡಿಗೆ ವಿದ್ಯುತ್ ಕೊಟ್ಟ ಶರಾವತಿ ಮುಳುಗಡೆ ಪ್ರದೇಶದ ರೈತರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಕೂಡಲಿ ಶೃಂಗೇರಿ ಮಠದ ಇನಾಂ ಜಮೀನಿನ ಸಾಗುವಳಿದಾರರಿಗೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಭೂ ಕಬಳಿಕೆ ನ್ಯಾಯಾಲಯದಿಂದ ತಾಲೂಕಿನ ಸಾಕಷ್ಟು ರೈತರಿಗೆ ನೋಟಿಸ್ ಬಂದಿದೆ. ಅರಣ್ಯ ಭೂಮಿ, ಕಂದಾಯ ಭೂಮಿ ಸಾಗುವಳಿದಾರರ ಹಿತ ಕಾಯುವ ಬದಲು ಈ ಸಮಸ್ಯೆಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಇದು ಕೇವಲ ಚುನಾವಣಾ ಗಿಮಿಕ್ ಅಷ್ಟೇ ಎಂದು ದೂರಿದರು.
    ಸೆ.12ರಂದು ಆಯೋಜಿಸಿರುವ ಪ್ರತಿಭಟನೆ ಪಾಲ್ಗೊಳ್ಳುವಂತೆ ಪ್ರಾಂತ ಮಟ್ಟದ ನಾಯಕರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದ್ದೇವೆ. ಸಾಗುವಳಿದಾರರು, ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts