ಭಟ್ಕಳ: ಫಾಸ್ಟ್ಯಾಗ್ ಹಾಕಿಕೊಂಡ ವಾಹನ ಮಾಲೀಕರಿಂದ ಕುಮಟಾ ಟೋಲ್ಗೇಟ್ಗಳಲ್ಲಿ ರಿಯಾಯಿತಿ ನೀಡದೆ, ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಕುಮಟಾ ಉಪವಿಭಾಗಾಧಿಕಾರಿ ಬಳಿ ಹಲವರು ದೂರು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹಳದೀಪುರದ ಬಳಿಯ ಹೊಳೆಗದ್ದೆ ಟೋಲ್ಗೇಟ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ. ಅಲ್ಲಿ ಆಗಾಗ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಇತ್ತೀಚೆಗೆ ನಡೆಸಲಾದ ಪ್ರತಿಭಟನೆಯಲ್ಲಿ ಕುಮಟಾ ಶಾಸಕರು ಎಚ್ಚರಿಕೆ ನೀಡಿದ ಬಳಿಕ ಕುಮಟಾ ಮತ್ತು ಹೊನ್ನಾವರದ ವಾಹನ ಸವಾರರಿಗೆ ಟೋಲ್ ಗೇಟ್ನಲ್ಲಿ ವಿನಾಯಿತಿ ನೀಡಲಾಗಿತ್ತು. ಕೆಎ 47 ನೋಂದಣಿ ಹೊಂದಿರುವ ವಾಹನಗಳಿಗೆ ಟೋಲ್ ಶುಲ್ಕದಲ್ಲಿ ರಿಯಾಯಿತಿ ಕಲ್ಪಿಸಲಾಗಿದೆ. ಆದರೆ, ಫಾಸ್ಟ್ಯಾಗ್ ಹೊಂದಿದ ಭಟ್ಕಳದ ಉದ್ಯಮಿಯೊಬ್ಬರಿಗೆ 75 ರೂ.ಗಳಂತೆ ಹಣ ಕಟ್ ಆಗಿದೆ. ಭಟ್ಕಳದ ಹಲವರಿಗೂ ಇದೇ ರೀತಿಯಾಗಿದೆ.
ಅಲ್ಲಿನ ಐಆರ್ಬಿ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಕನಿಷ್ಠ ಸೂಚನಾ ಫಲಕವನ್ನಾದರೂ ಹಾಕಿ ಸ್ಥಳೀಯ ವಾಹನ ಸವಾರರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ಭಟ್ಕಳದ ಉದ್ಯಮಿ ಜೈರಾಮ ಶಾನಭಾಗ ಆಗ್ರಹಿಸಿದ್ದಾರೆ.
ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ಕುರಿತು ಈಗಾಗಲೆ ಚರ್ಚೆ ನಡೆದಿದೆ. ಭಟ್ಕಳ ಸೇರಿ ಕೆಎ 47 ನೋಂದಣಿ ಇರುವ ವಾಹನಗಳಿಗೆ ಫಾಸ್ಟ್ಯಾಗ್ ಇಲ್ಲದಿದ್ದರೆ ರಿಯಾಯಿತಿ ನೀಡಲಾಗುತ್ತಿದೆ. ಫಾಸ್ಟ್ಯಾಗ್ ಹೊಂದಿದವರಿಗೂ ರಿಯಾಯಿತಿ ನೀಡುವ ಅಥವಾ ಸೂಚನಾ ಫಲಕವನ್ನಾದರೂ ಹಾಕಿಸುವ ಕುರಿತು ಐಆರ್ಬಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ.
| ಅಜಿತ ಎಂ. ಉಪವಿಭಾಗಾಧಿಕಾರಿ, ಕುಮಟಾ