ಹಳಿಯಾಳ: ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಅವರು 2015-16ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಬೆಳೆಗಾರರಿಗೆ ಪ್ರತಿ ಟನ್ಗೆ 305 ರೂ. ಪೋ›ತ್ಸಾಹ ಧನವನ್ನು ನೀಡುವುದಾಗಿ ಘೊಷಿಸಿದಂತೆ ಅವರ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದೆ.
ಬುಧವಾರ ಪಟ್ಟಣಕ್ಕೆ ಆಗಮಿಸಿದ ಡಿಸಿ ಡಾ. ಹರೀಶಕುಮಾರ ಕೆ. ಅವರನ್ನು ಭೇಟಿಯಾದ ಕಬ್ಬು ಬೆಳೆಗಾರರ ಸಂಘದ ನಿಯೋಗವು ಮನವಿ ಸಲ್ಲಿಸಿ ಕಬ್ಬು ಬೆಳೆಗಾರರ ಹಾಗೂ ತಾಲೂಕಿನ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
2016-17ನೇ ಸಾಲಿನಲ್ಲಿ ಸ್ಥಳೀಯ ರೈತರು ಬೇರೆ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡುತ್ತಿರುವುದನ್ನು ಕಂಡು ತಹಸೀಲ್ದಾರ್ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಕಾರ್ಖಾನೆಯ ಆಡಳಿತ ಮಂಡಳಿಯವರು ತಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ 2015-16ನೇ ಸಾಲಿನಲ್ಲಿ ಕಬ್ಬು ಪ್ರತಿ ಟನ್ಗೆ 305 ರೂ. ಪೋ›ತ್ಸಾಹ ಹಣ ನೀಡುವುದಾಗಿ ಘೊಷಿಸಿತ್ತು. ಭರವಸೆ ನೀಡಿ ಮೂರು ವರ್ಷವಾದರೂ ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಈ ಕುರಿತು ಹಿಂದಿನ ಡಿ.ಸಿ ಮತ್ತು ಎ.ಸಿ. ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರ ಮತ್ತು ಕಾರ್ಖಾನೆಯವರ ಸಭೆಯಲ್ಲಿ ರೈತರಿಗೆ ನೀಡಬೇಕಾಗಿದ್ದ 305 ರೂ.ಗಳನ್ನು ನೀಡುವಂತೆ ಠರಾವು ಪಾಸು ಮಾಡಿದ್ದರು ಅದನ್ನು ಕಾರ್ಖಾನೆಯವರು ಪಾಲಿಸುತ್ತಿಲ್ಲ. ರಾಜ್ಯ ಸರ್ಕಾರದ ಆದೇಶದಂತೆ ರೈತರಿಗೆ ಅವರ ಜಮೀನು ಮತ್ತು ಕಾರ್ಖಾನೆಯ ನಡುವಿನ ಅಂತರ ಆಧರಿಸಿ ಸ್ಲಾ್ಯಬ್ ಆಧಾರದಲ್ಲಿ ಕಬ್ಬು ಕಟಾವು ಮತ್ತು ಸಾಗಾಟದ ದರ ನೀಡಬೇಕು. ಕಳೆದ ವರ್ಷ ಆದ ಅತಿವೃಷ್ಟಿಯಿಂದಾಗಿ ತಟ್ಟಿಹಳ್ಳದಲ್ಲಿ ನೆರೆ ಬಂದ ಪರಿಣಾಮ ಹಳ್ಳದ ಪಾತ್ರದಲ್ಲಿರುವ ರೈತರ ಪಂಪ್ಸೆಟ್ ಹಾಗೂ ಕೃಷಿ ಪರಿಕರಗಳು ಕೊಚ್ಚಿಕೊಂಡು ಹೋಗಿದ್ದು ಅದರ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಎಸ್.ಕೆ. ಗೌಡ, ಗಿರೀಶ ಠೊಸುರ, ಶ್ರೀಕಾಂತ ಪಾಟೀಲ ಉಪಸ್ಥಿತರಿದ್ದರು.