ಚಿತ್ರದುರ್ಗ: ಪ್ರತಿ ಗ್ರಾಮಕ್ಕೂ ವಿಜ್ಞಾನದ ಮಹತ್ವ ತಲುಪಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಬೆಂಗಳೂರಿನ ಶ್ರೀನಾಥ ರತ್ನಕುಮಾರ ಸಲಹೆ ನೀಡಿದರು.
ವಿದ್ಯಾವಿಕಾಸ ಸಂಸ್ಥೆಯಲ್ಲಿ ಶನಿವಾರ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉದ್ಘಾಟಸಿ ಮಾತನಾಡಿದರು. ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿ, ವೈಚಾರಿಕ ಪ್ರಜ್ಞೆ ಬೆಳೆಸುವ ಕೆಲಸವಾಗಬೇಕು ಎಂದರು.
ಪ್ರತಿ ವರ್ಷವೂ ಇಸ್ರೋದಲ್ಲಿ ವಿಜ್ಞಾನಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. 195ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳಿವೆ. ಉಪಗ್ರಹ, ರಾಕೆಟ್ ತಯಾರಿಸುತ್ತಿವೆ. ವಿಜ್ಞಾನದಿಂದ ಎಲ್ಲರಿಗೂ ಉಪಯೋಗವಾಗಲಿದ್ದು, ಎಲ್ಲ ಭಾಗಗಳ ವಿದ್ಯಾರ್ಥಿಗಳಲ್ಲಿ ಈ ಕ್ಷೇತ್ರದ ಕುರಿತು ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರೃ ನಂತರ ದೇಶದ ವಿಜ್ಞಾನ ಕ್ಷೇತ್ರ ಸಾಕಷ್ಟು ಸಾಧನೆಗೈದಿದ್ದು, ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಹೊರಳುತ್ತಿದೆ. ಚಳ್ಳಕೆರೆ ಸಮೀಪ ಇಸ್ರೋ, ಡಿಆರ್ಡಿಒ ಸಂಸ್ಥೆಗಳಿವೆ. ಚಂದ್ರಯಾನ-2 ಮತ್ತು 3ರ ಯಶಸ್ಸಿಗೆ ಕೊಡುಗೆ ನೀಡಿದೆ. ಯಾವುದೋ ಸ್ಥಳದಲ್ಲಿ ಕೂತು ದತ್ತಾಂಶಗಳ ಮಾಹಿತಿ ಪಡೆಯುವಷ್ಟು ಮುಂದುವರೆದಿದೆ ಎಂದರು.
ಫೌಂಡೇಷನ್ನ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ವಿಭಿನ್ನವಾದ ವಿಜ್ಞಾನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್ ಮಾತನಾಡಿ, ವಿಜ್ಞಾನ ಸಂಬಂಧ ಹೆಚ್ಚೆಚ್ಚು ಕಾರ್ಯಕ್ರಮ ನಡೆಯಬೇಕು. ಇಂತಹ ಚಟುವಟಿಕೆಗೆ ಸ್ಪಂದಿಸಲು ಸಂಸ್ಥೆ ಸದಾ ಸಿದ್ಧ ಎಂದು ಭರವಸೆ ನೀಡಿದರು.
ಬಿಆರ್ಸಿ ಸಂಪತ್ಕುಮಾರ್, ಫೌಂಡೇಷನ್ನ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಖಜಾಂಚಿ ಕೆ.ವಿ.ನಾಗೇಂದ್ರರೆಡ್ಡಿ, ನಿರ್ದೇಶಕರಾದ ಈ.ರುದ್ರಮುನಿ, ಎಚ್.ಮಂಜುನಾಥ್, ಟಿ.ರಮೇಶ್ ಇತರರಿದ್ದರು.