ಸಂಕೇಶ್ವರ: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಯುವಂತೆ ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದು ಚೆನ್ನೈನ ರಾಮಕೃಷ್ಣ ಮಿಷನ್ ಆಶ್ರಮದ ಮಹಾಮೇದಾನಂದ ಸ್ವಾಮೀಜಿ ಹೇಳಿದರು.
ಈಚೆಗೆ ನಿಡಸೋಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಸ್ಥೆಯ ಕಾಲೇಜು ಮತ್ತು ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ‘ಶಿಕ್ಷಕ ಒಬ್ಬ ಕರ್ಮಯೋಗಿ’ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ಪ್ರಜೆಗಳಾಗುವಂತೆ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಯಾವ ವ್ಯಕ್ತಿ ತನ್ನ ಕಾಯಕದಲ್ಲಿ ಶ್ರೇಷ್ಠತೆ, ಪರಿಪೂರ್ಣತೆ ಹೊಂದಿರುವನೋ ಅವನೇ ನಿಜ ಅರ್ಥದಲ್ಲಿ ಕರ್ಮಯೋಗಿ ಆಗಿರುವನು. ನಾವು ನಮ್ಮನ್ನು ಸದಾ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತ ಹೋದರೆ ಸುಖ-ಶಾಂತಿ ನೆಮ್ಮದಿಯಿಂದ ವಂಚಿತವಾಗಬೇಕಾಗುತ್ತದೆ. ಅದರ ಬದಲಾಗಿ ನಮ್ಮನ್ನು ನಾವೇ
ನಿರಂತರವಾಗಿ ಉನ್ನತೀಕರಣ ಮಾಡಿಕೊಳ್ಳುತ್ತ ಹೋಗಬೇಕು ಎಂದರು.
ಮಂಗಳೂರಿನ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ವೇದಿಕೆಯಲ್ಲಿದ್ದರು. ಸಂಸ್ಥೆಯ ಅಧ್ಯಕ್ಷ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಕಾಲೇಜುಗಳ ಪ್ರಾಚಾರ್ಯರಾದ ಡಾ. ಎಸ್.ಸಿ.ಕಮತೆ, ಬಸವರಾಜ ಹಾಲಬಾವಿ, ಟಿ.ಎಂ.ಕಂಬಾರ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರೊ. ಬಿ.ಆರ್. ಉಮರಾಣೆ ಸ್ವಾಗತಿಸಿದರು. ಪ್ರಾಚಾರ್ಯ ಉಮೇಶ ನಾಯಕ ವಂದಿಸಿದರು.