ಗೋಕರ್ಣ: ಸಂಗೀತ ವಿದ್ಯೆ ಪ್ರಕೃತಿ ಮಾತೆಯ ಸವೋತ್ಕೃಷ್ಟ ಕೊಡುಗೆಯಾಗಿದೆ. ಅದು ಸಂಗೀತಗಾರನಿಂದ ಪ್ರೇಕ್ಷಕರ ಮೂಲಕ ಮರಳಿ ಪ್ರಕೃತಿಯನ್ನು ಸೇರುತ್ತದೆ ಎಂದು ಖ್ಯಾತ ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಹೇಳಿದರು.
ಮಹಾಬಲೇಶ್ವರ ಮಂದಿರದ ವತಿಯಿಂದ ಮಹಾಶಿವರಾತ್ರಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ಸರಸ್ವತಿಯ ಅನನ್ಯ ಆರಾಧನೆಯಾಗಿದೆ. ಸಂಗೀತ ಸೇವೆ ಪೂರ್ವ ಜನ್ಮದ ಸುಕೃತದಿಂದ ದೊರೆಯುತ್ತದೆ. ಸಂಗೀತ ಮುಖೇನ ಸರಸ್ವತಿಯನ್ನು ಭಜಿಸುವ ಎಲ್ಲರೂ ಪ್ರಾತಃ ಸ್ಮರಣೀಯರು. ಮಹಾಬಲೇಶ್ವರನ ಸನ್ನಿಧಿಯಲ್ಲಿ ಸಂಗೀತ ಸಮರ್ಪಣೆ ಮಾಡಲು ಯೋಗ ಬೇಕು. ಎಷ್ಟೋ ಸಲ ನಮಗೆ ಯೋಗ ಇಲ್ಲದೇ ಹೋದಾಗ ಮಂದಿರದ ಬಾಗಿಲ ತನಕ ಹೋಗಿಯೂ ದೇವರ ದರ್ಶನ ಸಿಗದೆ ಮರಳುವ ಸಂದರ್ಭ ಇರುತ್ತದೆ. ಈಶ ಸೇವೆಗೆ ಅವಕಾಶ ಒದಗಿಸಿದ ಶ್ರೀ ರಾಘವೇಶ್ವರ ಸ್ವಾಮೀಜಿ ಮತ್ತು ಮಹಾಬಲೇಶ್ವರ ಮಂದಿರದ ಆಡಳಿತ ಮಂಡಳಿಯನ್ನು ಅವರು ಅಭಿನಂದಿಸಿದರು. ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿ ಗಣಪತಿ ಭಟ್ಟ ಕೆಕ್ಕಾರ, ತಾಪಂ ಸದಸ್ಯ ಮಹೇಶ ಶೆಟ್ಟಿ, ಉದ್ಯಮಿ ನಾಗರಾಜ ಹಿತ್ತಲಮಕ್ಕಿ, ಪ್ರೊ. ಶಂಭು ಭಟ್ಟ ಕಡತೋಕಾ, ಜಯರಾಮ ಹೆಗಡೆ ಇದ್ದರು. ಉತ್ಸವ ಸಮಿತಿಯ ಡಾ. ಶೀಲಾ ಹೊಸ್ಮನೆ ನಿರ್ವಹಿಸಿದರು. ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ನಿರ್ವಹಿಸಿದರು.