ಗುತ್ತಲ: ಹಾವೇರಿ ನಗರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಕಂಚಾರಗಟ್ಟಿ-ಹರಳಹಳ್ಳಿ ಕ್ರಾಸ್ ಬಳಿ ಒಡೆದು ಮೂರು ದಿನಗಳಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಗುರುವಾರ ಸಂಜೆಯೇ ಮುಖ್ಯ ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಈ ಬಗ್ಗೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ನೀರು ಪೂರೈಕೆ ಸ್ಥಗಿತಗೊಳಿಸಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು ಹರಿದು ಹೋಗುತ್ತಿದೆ. ಅಲ್ಲದೆ, ರಸ್ತೆಯ ಮೇಲೂ ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ.
ಈ ಸ್ಥಳದಲ್ಲಿ ಪದೇಪದೆ ಪೈಪ್ಲೈನ್ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದರೂ, ಸೂಕ್ತ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಘಟನೆಯಿಂದಾಗಿ ಮೈಲಾರ ಜಾತ್ರೆಗೆ ತೆರಳುವ ಸಾವಿರಾರು ವಾಹನಗಳಿಗೆ ತೀವ್ರ ತೊಂದರೆಯಾಗಿದೆ.
ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿರುವ ವಿಷಯವನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ‘ವಿಜಯವಾಣಿ’ ತಂದ ಬಳಿಕ ಶನಿವಾರ ಸಂಜೆ 4 ಗಂಟೆಗೆ ಯಂತ್ರಗಳನ್ನು ಬಂದ್ ಮಾಡಿಸಲಾಗಿದೆ.
ಯಂತ್ರಗಳನ್ನು ತಕ್ಷಣವೇ ಸ್ಥಗಿತಗೊಳಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭಾನುವಾರ ಬೆಳಗ್ಗೆ ಪೈಪ್ಲೈನ್ ದುರಸ್ತಿಗೊಳಿಸಿ ನಂತರ ಹಾವೇರಿ ನಗರಕ್ಕೆ ನೀರು ಪೂರೈಸಲಾಗುವುದು.
| ಬಸವರಾಜ ಜಿದ್ದಿ, ಆಯುಕ್ತರು, ನಗರಸಭೆ ಹಾವೇರಿ