ವಿಜಯಪುರ: ಪುತ್ರಿಯ ಮದುವೆಗಾಗಿ 101 ಸಾಮೂಹಿಕ ವಿವಾಹ ನೆರವೇರಿಸುವುದಾಗಿ ಮಾಜಿ ಆರೋಗ್ಯ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಘೋಷಿಸಿದರು.
ಇದೇ ನ.29 ರಂದು ಸಂಜೆ 5.30 ಕ್ಕೆ ಗೋಧೂಳಿ ಮುಹೂರ್ತದಲ್ಲಿ ಐತಿಹಾಸಿಕ ಬೇಗಂ ತಾಲಾಬ್ ಮೈದಾನದಲ್ಲಿ ಪುತ್ರಿ ಸಂಯುಕ್ತಾ ಅವರ ಮದುವೆ ಸಮಾರಂಭ ನೆರವೇರಲಿದೆ.
ಇದೇ ಮದುವೆಯಲ್ಲಿ ಸಾಮೂಹಿಕ ವಿವಾಹ ನೆರವೇರಿಸಬೇಕೆಂಬುದು ಸಂಯುಕ್ತಾರ ಆಶಯವಾಗಿತ್ತು. ಆದರೆ, ಕರೊನಾ ಹಿನ್ನೆಲೆ ಜಿಲ್ಲಾಡಳಿತದಿಂದ ಪರವಾನಿಗೆ ಸಿಗಲಿಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರೊನಾ ಹಿನ್ನೆಲೆ ಸರಳವಾಗಿ ಮದುವೆ ನೆರವೇರಿಸಲಾಗುತ್ತಿದೆ. ಹೀಗಾಗಿ ಈ ಮದುವೆಯಲ್ಲಿ ಸಾಮೂಹಿಕ ವಿವಾಹ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಡಿಸಿಸಿ ಬ್ಯಾಂಕ್ ಗೆ 101 ವರ್ಷ ಭರ್ತಿಯಾಗಲಿದೆ. ಹೀಗಾಗಿ ಬ್ಯಾಂಕ್ ಶತಮಾನೋತ್ಸವ ಮತ್ತು ಸಾಮೂಹಿಕ ವಿವಾಹ ಒಟ್ಟಿಗೆ ನೆರವೇರಿಸಲಾಗುವುದು ಎಂದರು.
ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಕರೊನಾ ಕಾಲಘಟ್ಟದಲ್ಲಿ ನೆರವೇರಿಸಲಾಗದೆ ನಿಂತು ಹೋದ ಮದುವೆಗಳಿಗೆ ಆದ್ಯತೆ ನೀಡಲಾಗುವುದು. ಜಾತ್ಯಾತೀತವಾಗಿ ಎಲ್ಲ ಸಮುದಾಯದವರು ಹೆಸರು ನೋಂದಾಯಿಸಬಹುದಾಗಿದೆ. ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.