ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಿರಿಯಪ್ಪಗೌಡ ಬಡಾವಣೆ, ಕಂದಾಯ ಬಡಾವಣೆ, ಶ್ರೀರಾಂಪುರ, ಮಧುವನ ಬಡಾವಣೆಗಳಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಪಾದಯಾತ್ರೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.
ಉದ್ಯಾನದಲ್ಲಿ ಮದ್ಯ ಸೇವನೆ ಮಾಡುತ್ತ ವಾಯುವಿಹಾರಿಗಳಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಪೊಲೀಸ್ ಗಸ್ತು ನಿಯೋಜಿಸುವಂತೆ ಕಂದಾಯ ಬಡಾವಣೆಯ ನಿವಾಸಿ ನರಸಿಂಹ ಕೋರಿದರು.
ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಶಾಸಕರು ಸೂಚಿಸಿದರು.
ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದು, ಇದರಿಂದ ದಾರಿಹೋಕರಿಗೆ ತೊಂದರೆ ಉಂಟಾಗಿದೆ. ಒಳಚರಂಡಿ ಸ್ವಚ್ಛತೆ ಮಾಡಿಸಿಕೊಡುಂತೆ ಹಾಗೂ ಖಾಲಿ ನಿವೇಶಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವುಗಳ ಕಾಟ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಮಧುವನ ಬಡಾವಣೆ ನಿವಾಸಿ ರಾಜಶೇಖರ್ ಮನವಿ ಮಾಡಿದರು.
ಈ ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಪಾಲಿಕೆ ಸದಸ್ಯೆ ಚಂಪಕಾ, ಮುಖಂಡರಾದ ಗೋಪಾಲ್, ನಾಗೇಶ್, ಗೀತಾ, ವಿಶಾಲಾಕ್ಷಿ, ಚಂದ್ರಶೇಖರ್, ಉಮಾಕಾಂತ್, ಸೋಮಶೇಖರ್, ವಿನಯ್, ವಿಜಯಲಕ್ಷ್ಮೀ ಇನ್ನಿತರರಿದ್ದರು.