ಪುತ್ತೂರು: ಪಾಣಾಜೆ ಗ್ರಾಮದ ಕೋಟೆ ರಸ್ತೆಯ ಕೆಮಾಜೆ ಎಂಬಲ್ಲಿ ಜೆಸಿಬಿಯಲ್ಲಿ ಮಣ್ಣು ಅಗೆಯುವ ಸಂದರ್ಭ ಈರ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಮಾ. 4 ರಂದು ಬೆಳಿಗ್ಗೆ ನಡೆದಿದೆ. ಮಣ್ಣಿನಡಿ ಸಿಲುಕಿರುವ ಕಾರ್ಮಿಕರನ್ನು ಪಾಣಾಜೆ ಗ್ರಾಮದ ಪಾರ್ಪಳದವರು ಎಂದು ಹೇಳಲಾಗಿದೆ.
ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಇಳಿದಿರುವ ವೇಳೆ ಪೈಪ್ ಮುರಿದು ಬಿದ್ದು ಈರ್ವರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಪಕ್ಕದಲ್ಲಿಯೇ ಜೆಸಿಬಿ ಮಣ್ಣು ಅಗೆಯುತ್ತಿದ್ದುದರಿಂದ ಮಣ್ಣು ಜರಿದು ಹೊಂಡದೊಳಗೆ ಬಿದ್ದಿದೆ. ಇದರಿಂದ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.