ವಿಜಯಪುರ: ಜಿಲ್ಲೆಯಲ್ಲಿ ಪ್ರವಾಹದಿಂದ ತತ್ತರಿಸಿದ ರೈತಾಪಿ ವರ್ಗಕ್ಕೆ ತಕ್ಷಣವೇ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿ ಕನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಜಿಲ್ಲೆಯ ಆಲಮೇಲ ಮತ್ತು ಇಂಡಿ, ಸಿಂದಗಿ, ಚಡಚಣ ತಾಲೂಕಿನಲ್ಲಿ ಪ್ರವಾಹದಿಂದ ಹೆಚ್ಚಿನ ರೀತಿಯಲ್ಲಿ ಹಾನಿಯಾಗಿದೆ. ಈ ಭಾಗದ ಜನರು ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿವೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಜಾನುವಾರುಗಳಿಗೆ ಮೇವುಗಳಿಲ್ಲದೇ ಸಾವಿನ ಪರಿಸ್ಥಿತಿ ಉಂಟಾಗಿದೆ. ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಹಾನಿಯಾದ ಬೆಳೆಗಳ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಹಮ್ಮಿಕೊಂಡಿದ್ದರು. ಆದರೆ ವಿಜಯಪುರ, ಬಾಗಲಕೋಟೆ ಭಾಗಕ್ಕೆ ಭೇಟಿ ನೀಡದಿರುವುದು ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ಮುಖ್ಯಮಂತ್ರಿಗಳಿಗೆ ಜನಪರ ಕಾಳಜಿ ಇಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ನಗರ ಅಧ್ಯಕ್ಷ ಯಾಜ ಕಲಾದಗಿ, ಜಿಲ್ಲಾ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ, ಜಿಲ್ಲಾ ಉಪಾಧ್ಯಕ್ಷ ಮಾದೇವ ರಾವಜಿ, ಸೈಯ್ಯದ ದೇವರಮನಿ, ಶಶಿಧರ ಗಣಿಯಾರ, ಗಂಗಾಧರ ಭೋವಿ, ರಜಾಕ ಕಾಖಂಡಕಿ, ಎಂ.ಎಸ್.ಶಿರಬೂರ, ಶರಣಯ್ಯ ನಂದಿಕೋಲ, ಐ.ಸಿ.ಪಠಾಣ, ಡಿ.ಎಸ್.ಪೂಜಾರಿ, ಆಸೀ ಪೀರವಾಲೆ, ದಸ್ತಗೀರ ವಡಗೇರಿ, ದಾದಾಪೀರ ಮುಜಾವರ, ಬಾಬು ಯಾಳವಾರ ಮುಂತಾದವರು ಪಾಲ್ಗೊಂಡಿದ್ದರು.